ಬೆಂಗಳೂರಿಗೆ ಬಂದು ಎರಡು ದಿನವಾಗಿತ್ತು ..ಆತ್ಮೀಯರ ಜೊತೆಗಿನ ಮಾತು ಹರಟೆಗಳಲ್ಲಿ ಆ ಎರಡು ರಾತ್ರಿಗಳೇ ಕಾಣೆಯಾಗಿತ್ತು !!
ಮೊದಲೇ ಇಂಟರ್ನಲ್ ಕಾರುಬಾರಲ್ಲಿ ನಿದ್ದೆ ಅನ್ನೋ ನನ್ನ ಅತೀ ಪ್ರೀತಿಯ ಗೆಳೆಯ ಕಳೆದು ಹೋಗಿದ್ದ ....ಆದರೂ ನಂಗವತ್ತು ಏನನ್ನೋ ನೋಡಲೇ ಬೇಕೆಂಬ ಭಾವ ...ಆದರೂ ಮನದಲ್ಲೊಂದು ಸಣ್ಣ ಅಳುಕಿತ್ತು ...೯ ತಾಸುಗಳ ಕಾಲ ಬರಿಯ ಬಯಲು ರಂಗಮಂದಿರದಲ್ಲಿ ಕೂತು ನಂಗಿದನ್ನು ನೋಡೋಕೆ ಸಾಧ್ಯಾನಾ ? ಕಾಡಿ ಬೇಡಿ ಹೊರಡಿಸಿದ್ದ ಗೆಳತಿ ಏನಂದಾಳು ?....ನಂಗೆ ನಾ ಪ್ರಶ್ನಿಸಿದ್ದೆ ...ಆದರೆ ನೋಡಿದ್ದ ಮದುಮಗಳ ಭಾವಚಿತ್ರಗಳು ಸಮಾಧಾನಿಸಿದ್ದವು ನನ್ನ :) ...ಕೊನೆಗೂ ನಿರ್ಧರಿಸಿ ಪಯಣ ಸಾಗಿತ್ತು ಆ ಕಡೆಗೆ ....
ಸಮಯ ಸಂಜೆ ೭:೩೦ .ನಾವವತ್ತು ಬೆಂಗಳೂರು ಹೊರವಲಯದ ಮಲ್ಲತ್ತಹಳ್ಳಿಯ "ಕಲಾಗ್ರಾಮ"ದಲ್ಲಿದ್ದೆವು
ಕಲಾಗ್ರಾಮ-ಹೆಸರೇ ಸೂಚಿಸುತ್ತೆ ಇದೊಂದು ಕಲೆಯ ಗ್ರಾಮ ..ಕಲಾರಸಿಕರ ಊರೆಂದು ...
"ಮಲೆಗಳಲ್ಲಿ ಮದುಮಗಳು" ಅನ್ನೋ ಕನ್ನಡಿಗರ ಹೆಮ್ಮೆಯ ಕಾದಂಬರಿಯೊಂದನ್ನು ಕೂತು ನೋಡೋ ಭಾಗ್ಯ ದಕ್ಕಿತ್ತು ಆ ರಾತ್ರಿ ...
ನಾಟಕದ ಸಾರ ಹೊತ್ತು
ರಂಗವನ್ನೊಮ್ಮೆ ನೋಡಿ ನಾ ಆವಾಕ್ಕಾದದ್ದು ಸುಳ್ಳಲ್ಲ !!! ..ಸುಂದರ ರಂಗಸ್ಥಳ ಕೆರೆ ಅಂಗಳ .ಅದೆಷ್ಟು ಸ್ವಾಭಾವಿಕವಾಗಿತ್ತೆಂದರೆ ನಾ ಎಲ್ಲೊ ಕನಸಲ್ಲಿ ಅದೇ ಊರಿಗೆ ಹೋದಂತನಿಸಿತ್ತು ...ಜೊಗಿಯರು ಹೇಳೋ ಕಥೆಯ ಚಿತ್ರಣವದು ....
ರಂಗ ಪ್ರವೇಶ
.ಮೊದಲ ಪಾತ್ರದಾರಿ ಗುತ್ತಿ ಮತ್ತವನ ನಾಯಿ ಹುಲಿಯ ...ನಾಟಕದಲ್ಲಿ ಮೊದಲಿಂದ ಕೊನೆಯ ತನಕ ಹುಲಿಯ ಹುಲಿಯನಾಗೇ ಮೆರೆದದ್ದು ಮಾತ್ರ ನನಗತೀ ಹತ್ತಿರವಾದದ್ದು
ದುರ್ಗಮ ದಾರಿಯ ವರ್ಣನೆಯಲ್ಲಿ ಬರೋ ಉಂಬಳ ಜೀರುಂಡೆಯನ್ನೂ ಬಿಡದೇ ತೋರಿಸಿರೋ ಪರದೆಯ ಹಿಂದಿನ ಪರದೆಗೆ ನನ್ನದನಂತ ನಮನ .
ಕಿನ್ನರ ಕಿರುಗೆಜ್ಜೆಯ ಸುತ್ತ ಮೂಡಿರೋ ಹೆಜ್ಜೆ ಗುರುತಲ್ಲಿ ನಾಗಕ್ಕ ನಾಗತ್ತೆಯರ ಜೊತೆಗಿನದೊಂದು ಭಾವ ಐತ ಮತ್ತವನ ಮಡದಿ ಪಿಂಚಲುವಿನ ಮಧುರ ಪ್ರೀತಿಯ ಭಾವಕ್ಕೂ ಸೆರೆಯಾಯಿತು!...ನೋಡುತ್ತಿದ್ದರೆ ನಾವೆಲ್ಲಿ ಕುಳಿತಿದ್ದೆವು ಅನ್ನೋದೇ ಮರೆತು ಹೋಗೊ ಭಾವವದು ...
ತಲೆಮಾರಿನ ಕಸುಬು ಕೊನೆಯಾಗೋ ಸಮಯದಲ್ಲೊಂದು ಕ್ಲಿಕ್
ಎರಡನೇ ರಂಗದ ಆರಂಭ
ಎರಡನೇ ರಂಗಸ್ಥಳದಲ್ಲಿ ತಿಮ್ಮಿಯ ಪಾತ್ರ .....ತಿಮ್ಮಿ ಕಾಣೆಯಾದುದ್ದಕ್ಕೆ ಬರೋ ದೇವಿಯ ಪಾತ್ರ ಮನ ಮುಟ್ಟಿತ್ತು..ಪ್ರಸ್ತುತ ಜಗತ್ತಿಗನ್ವಯಿಸಿ ಈಗಿರೋ ಮಠ ಮಾನ್ಯರ ಬಗೆಗಿನ ಅಣುಕು ನೋಟದಲ್ಲೊಂದು ಸಾರವಿತ್ತು ....ಸುಬ್ಬಣ್ಣನ ಮಗ ದೊಡ್ಡಣ್ಣ ...ಅವನ ಮಗನಂತೂ ನಾಟಕದ ಕೇಂದ್ರ ....ಆ ಚಿಕ್ಕ ಪೋರನ ಅಭಿನಯವೂ ಮನಮುಟ್ಟಿತ್ತೆಂದರೆ ಪರದೆಯ ಹಿಂದಿನ ತಾಲೀಮಿನ ತಲ್ಲೀನತೆ ಸ್ಪಷ್ಟವಾಗಿತ್ತು ... ಬರುವೆ ಎಂದಿದ್ದ ನಲ್ಲ ಬರದೇ ಹೋದನಲ್ಲ ಅನ್ನೋ ಅವಳ ಸಂಕಟಕ್ಕೆ ಬೆಳಕಿಲ್ಲದ ಹಾದಿಯಲ್ಲಿ ಬೆಳಕ ಹುಡುಕುತ್ತಾ ಹೋಗೋದು ನೋವಿಲ್ಲದ ಬೀದಿಯನ್ನ ಹುಡುಕಿದಂತೆಯೇ ಅಂತ ಸಮಾಧಾನವಿಟ್ಟ ಮನವೊಂದಿತ್ತು!!
ಬರುವೆ ಎಂದ ನಲ್ಲಾ
ಬರದೇ ಹೋದನಲ್ಲ
ಬೆಳಕಿಲ್ಲದ ಹಾದಿಯಲ್ಲಿ
ನೋವಿಲ್ಲದ ಬೀದಿಯಲ್ಲಿ ...
ಬೆಳಕನ್ನರಸುತ್ತಾ ...
ಸುಬ್ಬಣ್ಣ ಹೆಗ್ಗಡೆ - ಪಾತ್ರ ಮೂರನೇ ರಂಗಸ್ಥಳದ್ದು ...ಜಾತೀಯತೆಯೇ ಬೇರಾದ ಹಳೆಮನೆ ಊರಲ್ಲಿ ಮಗನ ಕಳಕೊಂಡ ನೋವಲ್ಲಿ ಕುಗ್ಗಿ ಹೋಗಿದ್ದ ಗತ್ತಿನ ಸುಬ್ಬಣ್ಣ ..ಬೆಟ್ಟದಂತೆ ಮೆರೆದಿದ್ದ ಇವರು "ಬೆಟ್ಟಕ್ಕೂ ಆಯಾಸವಾಗುತ್ತೆ ಮಾರಾಯ " ಅನ್ನುತ್ತಾ ಅಸಹಾಯಕತೆಯ ,ವ್ಯಾಕುಲತೆಯ ಮನೋಭಾವದ ಗುಟ್ಟೊಂದನ್ನ ನೋಡುಗ ಪ್ರಜೆಗೂ ಸಲೀಸಾಗಿ ವರ್ಗಾಯಿಸಿದ್ದರು ...ಇಲ್ಲಿ ಮಾತ್ರ ಕಣ್ಣಂಚು ಮಾತಾಡಿತ್ತು (ಬಹುಶಃ ಎಲ್ಲರ ಕಣ್ಣೂ ಒದ್ದೆಯಾಗಿತ್ತೇನೋ )
ಬೆಟ್ಟಕ್ಕೂ ಸುಸ್ತಾಗುತ್ತೆ ಮಾರಾಯ ಅನ್ನೋ ವ್ಯಾಕುಲತೆ
ಅಂತಕ್ಕನ ಹೋಟ್ಲಲ್ಲಿ -ಸುಬ್ಬಣ್ಣ ಹೆಗ್ಗಡೆ
ಇಲ್ಲಿಯೆ ಅಂತಕ್ಕನ ಹೋಟೆಲ್ ..ಇಲ್ಲಿಯೇ ಸುಬ್ಬಣ್ಣ ಹೆಗ್ಗಡೆ ದೇವಯ್ಯನ ಮಗನಲ್ಲಿ ತನ್ನ ಮಗನನ್ನ ಹುಡುಕೋದು ....ಇಲ್ಲಿಯೆ ಅಂತಕ್ಕನ ಮಗಳು ಕಾವೇರಿಯ ಬದುಕ ಅಂತ್ಯ ...ಹಾಗೆಯೆ ಇಲ್ಲಿಯೆ ದೊಡ್ಡಯ್ಯನ ಹೆಂಡತಿಯ ಬಾಳೂ ಅಂತ್ಯ !!!
ಇದೊಂದು ಶೋಕದ ಮನೆಯೆಂದರೆ ಸರಿಯಾದೀತೇನೋ ! ....
ಕೊನೆಯ ರಂಗಸ್ಥಳ- ಹೊಂಗೆಯ ಮನೆ ....
ಇಲ್ಲಿಯೇ ಎಲ್ಲಾ ಪಾತ್ರಗಳೂ ಒಂದಾಗೋದು ... "ಇಲ್ಲಿ ಯಾರೂ ಮುಖ್ಯರಲ್ಲ ..ಯಾರೂ ಅಮುಖ್ಯರಲ್ಲ ..ಯಾವುದೂ ಯಃಕಶ್ಚಿತವಲ್ಲ " ಅನ್ನೋ ಮದುಮಗಳ ಆಶಯದ ಕೇಂದ್ರಿಕೃತವಾಗಿರೋದು :)
ಜಾತೀಯತೆಯ ಸೋಂಕು ....ಎಲ್ಲವನ್ನೂ ಮೆಟ್ಟಿ ನಿಂತ ಮಾನವತೆಯ ಲಿಂಕು!
ಬೆಟ್ಟದ ತುದಿಯಲ್ಲಿನ ಗುತ್ತಿ -ತಿಮ್ಮಿಯ ಭಾವಗಳು ..ಬೆಟ್ಟದ ಕೆಳಗಿನ ಹುಲಿಯನ ಭಾವ ...ಕೊನೆಗೂ ಯಜಮಾನನಿಗಾಗಿ ಕೊನೆಯಾಗೋ ಹುಲಿಯ ಹುಲಿಯನಾಗೇ ಮೆರೆದು ಧೀಮಂತನಾಗೇ ಮಣ್ಣಾಗಿ ಹೋದ.. ಅದಕ್ಕೆ ರೋದಿಸೋ ಗುತ್ತಿ ..ಪ್ರವಾಹ,ಮಳೆ .
ಪರದೆಗಿಲ್ಲಿ ತೆರೆ ಬಿತ್ತು
ಹೌದು......ನಾ ನೋಡಿದ ಮೊದಲ ನಾಟಕವಿದು ....ಮನ ತಟ್ಟಿತ್ತು ...ಮನಸ್ಸು ಮುಟ್ಟಿತ್ತು ...ಮತ್ತೊಮ್ಮೆ ನೋಡಬೇಕೆಂದು ಕಾಡಿತ್ತು ...
ನೀವು ಬರಿಯ ಕಲಾವಿದರಲ್ಲ ....ಕಲೆಯಲ್ಲಿ ದೈವತ್ವವನ್ನ ಕಾಣೋ ,ಕಲೆಯನ್ನ ಉಸಿರಾಗಿಸಿಕೊಂಡು ,ಕಲೆಯನ್ನ ಹಂಚುತ್ತಿರೋ ಕಲಾ ಪೋಷಕರೂ ಕೂಡಾ ....
ಪರದೆಯ ಹಿಂದಿನ ನಿಮ್ಮೀ ಪರಿಧಿಯ ಶ್ರಮಕ್ಕೆ ನನ್ನದೊಂದು ನಮನ ....
ಕಲಾಕ್ಷೇತ್ರದಲ್ಲೊಂದು ಕಲಾರಾಧನೆ ಮಾಡಿದ ಸಾರ್ಥಕ್ಯ ಭಾವವಿವತ್ತು.
ಅವತ್ತಿನ ಆ ಖುಷಿಗೆ ಪಾಲುದಾರರಾಗಿ -ಸುಬ್ರಹ್ಮಣ್ಯ ಹೆಗಡೆ (ಭಾವಸ್ರಾವದ ಗೆಳೆಯ ),ಶ್ರೀವತ್ಸ ಕಂಚಿಮನೆ (ಭಾವಗೊಂಚಲಿನ ಆತ್ಮೀಯ) ,ಮೈತ್ರಿ ಹೆಗಡೆ (ಆತ್ಮೀಯ ಗೆಳತಿ)













