Tuesday, August 13, 2013

ಸ್ತಬ್ಧ



ಮಂಜು ಮುಸುಕಿದ ಹಾದಿಯಲಿ ಮತ್ತದೇ ಮೌನದ ಒಬ್ಬಂಟಿ ಪಯಣದ ಜೊತೆಗೆ ಕನಸಿನೂರಿನ ಮನದ ಭಾವದ ಸಂತೆಯ ಮಾತೊಂದ ಹೇಳಬಂದೆ ನಾ....ಕೊನೆಗೂ ನಿನಗೆ ಪೂರ್ತಿಯಾಗಿ ಸೋತು....

ಮುದ್ದು ಗೆಳೆಯಾ,

ಆಶ್ಚರ್ಯವಾದೀತು ನಿನಗೀ ಸಂಭೋದನೆ .ವರ್ಷಗಳ ಹಿಂದೆ ನೀ ಬಯಸಿದ್ದ ನಿನ್ನದೇ ಹುಡುಗಿಯ ಭಾವವಿದು ಕಣೋ .ಇಷ್ಟದ ವಿಷಯದ ಬಗೆಗೆ ಒಂದೇ ಒಂದು ಮಾತಾಡು ಸಾಕು ಅಂತ ಪರಿ ಪರಿಯಾಗಿ ಬಿಕ್ಕಿದ್ದ ನಿನ್ನ ಮನಕ್ಕೊಂದು ಮುಷ್ಕರದ ನಡುವೆಯೂ ಮೌನವ ಮಾತ್ರ ಬಿಟ್ಟು ಅತೀ ಕಷ್ಟದಿಂದ ನಿನ್ನಿಂದೆದ್ದು (ನಿನ್ನ ಬದುಕಿಂದ) ಬಂದ ಅದೇ ಮೌನದ ಗೆಳತಿಯ ಭಾವವಿದು.

ಆದರೆ ನಿಂಗಿವತ್ತಿಲ್ಲಿ ಇದ ಕೇಳೋ ಮನವಿಲ್ಲದೇ ಇದ್ದೀತು ! ಆದರೂ ಮೌನದ ಮಾತೊಂದು ಮುರಿದು ನಾ ಮಾತಾಡಬಂದೆ ಅದೆಷ್ಟೋ ದಿನಗಳ ನಂತರ ಮತ್ತದೇ ಮೌನದ ಅರಮನೆಗೆ .ಇವತ್ತೀ ಭಾವವ ಹೇಳೋಕೆ ಧೈರ್ಯ ಬಂದಿದ್ದು ಮಾತ್ರ ನಿನ್ನ ವರ್ಷದ ಹಿಂದಿದ್ದ ಅದೇ ಕಾಳಜಿ ,ಪ್ರೀತಿಯ ಕಂಗಳ ಮತ್ತಿವತ್ತು ನೋಡಿದ ಮೇಲೆ .

ಅದೆಷ್ಟು ಚಂದದ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದೆ ..ನಿನ್ನದೇ ಕನಸುಗಳ,ನಿನ್ನ ಪುಟ್ಟ ಅರಮನೆಗೆ ಪ್ರೀತಿಯಿಂದ ಆಹ್ವಾನಿಸಿದ್ದ ಈ ಮುದ್ದು ರಾಜಕುಮಾರನ ಪ್ರೀತಿಯ ಅವತ್ತು ಒಪ್ಪಿಕೊಳ್ಳೋ ಮನಸು ,ಧೈರ್ಯ ಎರಡೂ ಇರಲಿಲ್ಲ ನಂಗೆ .ಗೋಗರೆದು ಕೇಳಿದ್ದ ಪ್ರೀತಿಯ ಚೂರನ್ನೂ ನಿನಗೆ ಕೊಡೋಕೆ ಇರದ ನನ್ನದೇ ಮನದ ಬಗೆಗೆ ನಂಗಿವತ್ತೂ ಬೇಜಾರಿದೆ .

ನಾ ಕಂಡ ಕನಸ ಬದುಕು ಎದುರುಗಿದೆ ಕಣೇ ..ಆದರೂ ನೀನಿಲ್ಲದ (ಸಿಗದ) ನೋವು ದಿನ ಕಾಡುತ್ತೆ ಅಂತ ತೀರಾ ಕೇಳದ ಸ್ವರದಲ್ಲಿ ಅವತ್ತಿದೇ ರಾತ್ರಿ ಬಿಕ್ಕಿದ್ದ ನಿನ್ನ ಧ್ವನಿಗೆ ಸ್ವಲ್ಪ ಮಟ್ಟಿಗೆ ಮನ ಕರಗಿದ್ದು ಸುಳ್ಳಲ್ಲ .ಆದರೆ ನಿನ್ನೆದುರು ನಾ ಸೋಲಲಾರೆ ಅನ್ನೋ ಹಠವೇ ಮನದ ಮಾತೊಂದ ಆಲಿಸೋಕೂ ಮುಂಚೆಯೇ ಆ ಸಣ್ಣ ಒಲವನ್ನ ತಳ್ಳಿಹಾಕಿತ್ತು .

ಚಂದದ ಬದುಕು,ಬಣ್ಣ ಬಣ್ಣದ ಕನಸುಗಳು,ಪ್ರೀತಿಸೋ ಮನೆ ಎಲ್ಲವುಗಳ ಮುಂದೆಯೂ ಎದ್ದು ಕಾಣೋದು ನಿನ್ನ ಮುಖ ಅಂತ ದಿನೇ ದಿನೇ ಭಾವುಕನಾಗಿ ನುಡಿಯೋ ನಿನಗೆಲ್ಲಿ ಪೂರ್ತಿಯಾಗಿ ಕಳೆದು ಹೋಗ್ತೀನೋ ಅನ್ನೋ ಭಯಕ್ಕೆ ಏನೋ ನಿನ್ನ ನಾ ಪೂರ್ತಿಯಾಗಿ ನಿರ್ಲಕ್ಷಿಸತೊಡಗಿದ್ದೆ .

"ನಿನ್ನ ಬಿಚ್ಚುನುಡಿಯಲ್ಲಿ ಕಂಡೆ

ವಾಸ್ತವಿಕತೆಯನ್ನಾ...

ನಿನ್ನ ಮುಗುಳ್ನಗೆಯಲ್ಲಿ ಕಂಡೆ

ಸಣ್ಣ ಪ್ರೀತಿಯ ಸೆಲೆಯನ್ನಾ ..."

ಹೀಗೇ ಏನೇನೋ ಸಾಲುಗಳ ಗೀಚಿಬಿಟ್ಟಿದ್ದೆಯಲ್ಲೋ ಹುಡುಗ ..ಮನದ ಭಾವಗಳ ಮುಚ್ಚಿಟ್ಟುಕೊಳ್ಳೋ ಶತ ಪ್ರಯತ್ನದಲ್ಲಿ ಸೋತೆ ಅನಿಸಿದಾಗಲೆಲ್ಲಾ ನಿನ್ನ ಮೇಲಿನ ನನ್ನ ಸಿಟ್ಟು ತಿರುಗೋದು ಮುಖದ ಮಂದಹಾಸದ ಕಡೆಗೆ ! ನಗು ಅನ್ನೋ ಪದವೇ ಮುಖದಲ್ಲಿ ಸುಳಿಯೋಕೆ ಬಿಟ್ಟಿರಲಿಲ್ಲ ! ಯಾಕೋ ಹುಡುಗ ನಿನ್ನನ್ನಷ್ಟು ದ್ವೇಷಿಸಬಂದೆ !

ನಾನೇ ಕಟ್ಟಿಕೊಂಡ ನನ್ನದೇ ಮನದ ಬೇಲಿಯ ದಾಟಿಯೂ ನೀ ಬಂದಿದ್ದೆ ನೋಡು ..ಅದೇ ಇದ್ದೀತು ಈ ತರದ ಭಯಂಕರ ದ್ವೇಷದ ಕಾರಣ


 
ಕೊನೆಗೊಮ್ಮೆ ಭಾವಗಳೇ ಇಲ್ಲದ ಹುಡುಗಿ ನೀ ಅಂತ ಧಿಕ್ಕರಿಸಿ ಎದ್ದು ಹೊರ ನಡೆದಿದ್ದೆ ನೀ ...

ಮನಸ್ಸಿನ ಮೇಲೆ ನಡೆದು ತೀರಾ ಬೇಕೆಂದಾದ ಹೊರ ಹೋಗಿದ್ದ ನಿನ್ನ ಮೇಲೆ ನಂಗಾಗಿದ್ದ ನಿರಾಸೆ ಅಷ್ಟಿಷ್ಟಲ್ಲ :( ಸ್ವಲ್ಪ ಸ್ವಲ್ಪವಾಗಿ ನಿನ್ನತ್ತ ವಾಲುತ್ತಿದ್ದ ಮನಕ್ಕೆ ಮೌನದ ಮುಖವಾಡ ಹಾಕಿ ಪಕ್ಕಕ್ಕೆ ಸರಿಸಿದ್ದೆ ಅಷ್ಟೇ ...ಅದೂ ಒಂದಿಷ್ಟು ಹೇಳಲಾಗದ ನನ್ನದೇ ಪರಿಸ್ಥಿತಿಗಳಿಗೆ ಕಟ್ಟುಬಿದ್ದು ...ಆದರಲ್ಲೊಂದು ದೊಡ್ಡ ಒಲವಿತ್ತು ಅನ್ನೋದ ನೀ ಅರ್ಥ ಮಾಡಿಕೊಳ್ಳೋಕೆ ಸೋತಿದ್ದೆ ...ಯಾವತ್ತೂ ಸೋಲದ ನಾನೂ ನಿನ್ನೆದುರು ಸೋಲಲೇ ಬಾರದೆಂಬ ಹಠದಲ್ಲಿ ಪೂರ್ತಿಯಾಗಿ ಸೋತು ಹೋಗಿದ್ದ ನೀ ಎದ್ದು ಹೋದ ಆ ದಿನ .

ನಿನ್ನ ಪ್ರೀತಿಯ ಅರಿವು ನಂಗಾಗಿದ್ದು ನೀ ಎದ್ದು ಹೋದ ಮೇಲೆ ...ದಿನವೂ ಮಾತಾಡೋ ಕೆ ನೀನಿದ್ದೆ....ನಾ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಮತ್ತದೇ ಮಧುರ ಭಾವಗಳ ಹೊತ್ತು ಮಾತಾಡೋಕೆ ಬರುತ್ತಿದೆಯಲ್ಲ ಅನ್ನೋದ ನೆನಸಿಕೊಂಡ್ರೆ ನಾ ಮಾಡಿದ್ದ ತಪ್ಪು ,ಬೇಸರಗಳ ಮುಜುಗರ ಕಾಡುತ್ತಿತ್ತು ..

ಆದರೂ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಇವತ್ತು ಎದುರು ಮಾತಾಡಬಂದೆ ನೋಡು ...attitude ಅಂದ್ರೆನೇ ನೀನು ಅಂತಿದ್ದ ಹುಡುಗ ಇಷ್ಟು ಬೇಸರಗಳ ನಂತರವೂ ನನ್ನಲ್ಲಿ ಮಾತಾಡ ಬಂದಿದ್ದಕ್ಕೊಂದು ಶರಣು ಕಣೋ ಗೆಳೆಯ.

ಆದರೆ ಇವತ್ತು ನಿನ್ನ ಕಂಗಳಲಿ ಪ್ರೀತಿಯ ಭಾವವೊಂದ ಹುಡುಕಿ ಸೋತೆ ನಾ ...ವರ್ಷಗಳ ಹಿಂದೆ ನಿನ್ನ ಬಿಟ್ಟು ಇನ್ನೇನೂ ಇರದಿದ್ದುದು ಇದೇ ಕಣ್ಣಲ್ಲೇ ಕಣೇ ಅಂತ ನಿನ್ನ ಪ್ರತಿನಿಧಿಸಿ ಅಣುಕಿಸಿತ್ತು ನಿನ್ನೀ ಕಂಗಳು ...

ಪ್ರೀತಿ ಕಂಗಳಲ್ಲಿ ದಿವ್ಯ ನಿರ್ಲಕ್ಷವೂ ಇರಲಿಲ್ಲವಲ್ಲೋ ಹುಡುಗ ! ಸ್ವಲ್ಪ ಸಮಾಧಾನವಾಗಿದ್ದು ಇಲ್ಲಿಯೇ .

ಮೌನದ ಭಾವವೊಂದ ಮನಬಿಚ್ಚಿ ಹೇಳೋಕೆ ಬಂದ ನಂಗೆ ನಿನ್ನ ಕಂಗಳಲ್ಲಿನ ತಟಸ್ಥ ಮೌನವ್ಯಾಕೋ ಸಹ್ಯವಾಗಲೇ ಇಲ್ಲ ..ನೀ ನನ್ನ ಕಣ್ಣಂಚ ಭಾವಗಳಿಗೆ ಸಂಭಂದಿಸಿದವನೇ ಅಲ್ಲ ಅನ್ನೋ ತರ ದೂರದ ತಿರುವು ನೋಡಿ ನಿನ್ನ ಮೌನ ಸಾಧಿಸಿದೆ .. ನಿನ್ನ ಮೌನ ಸಾಮ್ರಾಜ್ಯದ ಗೋಡೆಯ ಹಾರಿ ಬರೋ ಸಣ್ಣ ಪ್ರಯತ್ನ ಮಾಡದೇ ಹಾಗೆ ಕೈ ಕಟ್ಟಿ ಕುಳಿತುಬಿಟ್ಟೆ ..

ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು ...


 
ನನ್ನ ಮೌನಕ್ಕೆ ನಿನ್ನ ಮೌನದ ಸಾಥ್ ಬೇಡ ಮುದ್ದು ...ಪರವಾನಿಗೆ ಪಡೆಯದೇ ಪ್ರೀತಿಯ ಹೇಳಿಕೊಂಡು ಈಗ ಎಲ್ಲವ ಮರೆತು ನಿನ್ನಷ್ಟಕ್ಕೆ ನೀನಿರೋ ತರ ಭಾವಗಳ ತೋರ್ಪಡದೇ ಇರಬಲ್ಲೆ ಅನ್ನೋ ಭ್ರಮೆಯ ಬಿಟ್ಟು ಬಿಡು ...ಯಾಕಂದ್ರೆ ನಿನ್ನ ನಾಜೂಕು ಭಾವಗಳೆ ನನ್ನ ಬದುಕ ಚಿತ್ತಾರವಾದೀತು...ನಿನ್ನ ಪ್ರೀತಿಗೆ ಅವಳ ಎರಡರಷ್ಟು ಹಠ ತೋರಿದ್ದ ಅದೇ ಹುಡುಗಿಯಾಗಿ ಮತ್ತೆ ಕೇಳ್ತೀನಿ ಕಣೋ ...ಮತ್ತೊಮ್ಮೆ ಹೇಳಿಬಿಡು " you are my world ".

ಆದರೂ ಇವತ್ತಿನ ನಿನ್ನ ಬಿರುನಡೆಯಲ್ಲಿ ಕಂಡೆ

ಧೃಡತೆಯ ನಾ..

ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....
ನಿನ್ನವಳು.

 

 

Sunday, August 4, 2013

ಸ್ನೇಹ ದಿಬ್ಬಣದಿ ...


ನಿಮಗದೆಷ್ಟು ಧಾರಾಳತನ ,
ಬೇಡವೆಂದರೂ ಬಂದು ಬೆಚ್ಚಗಿನ ಗೂಡೊಂದ ಕಟ್ಟಿ
ಮನದಲ್ಲೊಂದು ಮಹಲು ಮಾಡಿ
ನೆನಪುಗಳ ಬುತ್ತಿಯನಿಲ್ಲೇ ಬಿಟ್ಟು ಹೋಗೋ ನಲ್ಮೆಯ ಸ್ನೇಹಿತರಿಗಾಗಿ ....

 ಭಾವಗಳೆಲ್ಲವಕ್ಕೂ ಜೊತೆ ನಿಂತು ಸ್ನೇಹದ ಮೊದಲ ಪ್ರೀತಿ ತೋರೋ ಸಂತೆಯಲ್ಲಿಯೂ ಟೆಂಟ್ ಕಟ್ಟಬಲ್ಲ ಹುಡುಗಿ ,ಸಿಟ್ಟಿಗೂ ಮೈತ್ರಿ ಮಾಡಿಸೋ ,ಆಮೇಲೊಮ್ಮೆ ತಾನೇ ಸಿಟ್ಟಾಗಿ ಆ ಸಿಟ್ಟನ್ನ ಕಣ್ಣ ಹನಿಗಳ ಜೊತೆ ಮೈತ್ರಿಯಾಗಿಸೋ ಗೆಳತಿ, ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಹಾಗೇ ಮಾತಾಡಿಸೋ ಸಾಂತ್ವಾನಿಸೋ ಮರಿ ಗೆಳೆಯ , ತೀರಾ ಪರಿಚಿತನಲ್ಲದ ಬರಿಯ ಭಾವಗಳ ತೇರಲ್ಲಿ ಜೊತೆಯಾಗಿ ಪೂರ್ತಿ ಬದುಕ ಭಾವಗಳನ್ನ ಹರವಿಟ್ಟು ಕಣ್ಣಂಚು ಮಾತಾಡೋ ತರ ಮಾಡಿದ್ದ ಸ್ನೇಹಿತ , ತಲೆಹರಟೆ ಮಾಡೋ ,ಕಾಲೆಳೆದು  ಬೇಜಾರು ಕಣೋ ಅಂದಾಗ ರಿಯಲಿಸ್ಟಿಕ್ ಆಗಿರದ ಪ್ಲಾನ್ ಗಳ ಕೊಟ್ಟು  ಫೋನ್ ನೋಡ್ಕೊಂಡು ನಗೊ ತರ ಮಾಡೋ ಈಚೆಗೆ ಪರಿಚಿತನಾಗಿ ಆತ್ಮೀಯ, ಬದುಕ ಪಯಣದಲ್ಲಿ ಒಂದಿಷ್ಟು ಕಾಲ ಜೊತೆಯಾಗಿ ಒಂದಿಷ್ಟು ನನ್ನದೇ ಭಾವಗಳ ಮೂಲವಾಗಿ ತಿರುವಿನಲ್ಲಿ ಕೈ ಮಾಡಿ ಮತ್ತೆಲ್ಲೊ ಜೊತೆಯಾಗೋ ಬರಿಯ ಸ್ನೇಹಿತನಾಗುಳಿಯದ ಆತ್ಮೀಯ , ಭಾವಗಳ ತೇರಲ್ಲಿ ಮುಖ ನೋಡದೇ ಹುಟ್ಟಿರೋ ಅದೆಷ್ಟೋ ಸ್ನೇಹ ,ಅದೆಷ್ಟೋ ಪ್ರೀತಿ.
ಆಹ್ ! ಹೀಗೊಂದು ಸ್ನೇಹದ ವ್ಯಾಖ್ಯಾನವ ಇವತ್ತಿಲ್ಲಿ ಹೇಳೋ ಭಾಗ್ಯ ನಂದೇನೋ ..




ಮಾಡೋದು ಪೂರ್ತಿ ತಲೆಹರಟೆ ,ಜೊತೆಯಲ್ಲಿದ್ದಾಗ ಮಾಸದ ನಗು ,ಬಿಡದೇ ಕಾಲೆಳೆಯೋ ಚಟ ,ಕಾಡಿಸೋ ಮುದ್ದಿಸೋ ಮನ ,ಒಂದಿಷ್ಟು ಜಗಳ ,ಒಂದಿಷ್ಟು ಖುಷಿಗಳ ಜೊತೆ ನೆನಪಾಗೋ ಭಾವವೊಂದೆ .
ತುಂಬಾ ಇಷ್ಟವಾಗೋ ಭಾವ .....ಜೊತೆಯಲ್ಲೇ ಜೊತೆಯಾಗೋ ಈ ಸ್ನೇಹ ಭಾವ.

ಯಾರೊಂದಿಗೂ ಅಷ್ಟಾಗಿ ಮಾತಾಡದ ಹುಡುಗಿ ಇಲ್ಲಿ ಮಾತ್ರ ಅವಳಲ್ಲವೇ ಅಲ್ಲ ಅನ್ನೋ ಅಷ್ಟು ಮಾತಾಡ್ತಾಳೆ ..ತೀರಾ ಮಾತಾಡೋ ಗೆಳತಿ ಕೂಡಾ ಒಮ್ಮೊಮ್ಮೆ ಮೌನಿಯಾಗ್ತಾಳೆ ..ತೀರಾ ತಲೆ ಕೆಡಿಸಿಕೊಳ್ಳೋ ವಿಷಯಕ್ಕೆ ದೊಡ್ಡದೊಂದು ಅರ್ಥವಾಗದ ನಗು ತೋರಿ ಗುಂಪಿನಲ್ಲಿ ಬೈಸಿಕೊಳ್ತಾನೆ ...ತುಂಬಾ ಕೂಲ್ ಆಗಿ ಮಾತಾಡೋ ಹುಡುಗ ಕೂಡಾ ತಪ್ಪಿಲ್ಲದ ಅವಳ ತಪ್ಪಿಗೆ ಸಿಡಕ್ತಾನೆ....ಪ್ರೀತಿಯಲ್ಲಿ ಸೋತು ಬಂದ ಗೆಳತಿಗೆ ಒಮ್ಮೊಮ್ಮೆ ಸಮಾಧಾನಿಸಿದರೆ ಒಮ್ಮೊಮ್ಮೆ ದೊಡ್ಡ ಲೆಕ್ಚರ್ ಕೊಡ್ತಾರೆ. ಮನದ ಚಿಕ್ಕ ಚಿಕ್ಕ ಭಾವಗಳ ಜೊತೆಯೂ ಹಾದಿ ಸವೆಸ್ತಾರೆ .
ಖುಷಿಯ ಮೊದಲ ಗೆಲುವ ಸಂದಾಯವಾಗೋದು ,ನೋವ ಮೊದಲ ಎಳೆಯ ಗುರುತು ಸಿಗೋದು,ಕಣ್ಣಂಚ ಭಾವದ ಕಟ್ಟೆ ಒಡೆಯೋದು  ಇಲ್ಲಿ ಮಾತ್ರವೇನೋ
ಬಹುಶಃ ಎಲ್ಲಾ ಭಾವಗಳನ್ನೂ ಮುಲಾಜಿಲ್ಲದೇ ಹಂಚಿಕೊಳ್ಳೋದು ಸ್ನೇಹದಲ್ಲಿ ಮಾತ್ರ ಸಾಧ್ಯವೇನೋ .
ಮಾಡಿಕೊಂಡ ಅದೆಷ್ಟೋ ಜಗಳಗಳ ನಂತರವೂ ಮತ್ತದೇ ತುಂಟಾಟ ,ಅದೇ ಮುದ್ದು ,ಅದೇ ಆತ್ಮೀಯತೆ ...ಖುಷಿ ಅನಿಸುತ್ತೆ  ಹೀಗೊಂದು ಸ್ನೇಹ ದಕ್ಕಿದ್ದು ...

ಮನದ ಬೇಸರಗಳ ಜೊತೆ ನೀವೂ  ಹಾದಿ ಸವೆಸಿದ್ದೀರ .ಖುಷಿಗಳ ಜೊತೆ ಡೇರಿಮಿಲ್ಕ್ ಹಂಚಿಕೊಂಡಿದ್ದೀರ ...ಮುರಿದುಬಿದ್ದ ಪ್ರೀತಿಯ ಭಾವಗಳ ಜೊತೆ ದೊಡ್ಡ ದೊಡ್ಡ ಮಾತಿನ ಅಶ್ರುತರ್ಪಣ ಬಿಟ್ಟಿದ್ದೀರ !! ಯಾಕೋ ಕಾಣೇ ..ತೀರಾ ಅರ್ಥವಾಗದ ,ಬೆರೆಯದ ಸ್ವಭಾವಗಳಲ್ಲಿ ನಾ ಒಂಟಿ ಅನಿಸೋವಾಗಲೆಲ್ಲಾ ದೂರದಿಂದಲೇ ಮಾತಾಡಿ ಇಲ್ಲೇ ಎಲ್ಲೋ ಇದ್ದೀರೇನೋ ಅನ್ನೋ  ಭಾವವೊಂದ ನನಗಾಗಿ ಹೊತ್ತು ಬಂದಿದ್ದೀರ .
ಆದ ಅದೆಷ್ಟೋ ಕ್ರಶ್ ಗಳಿಗೆ ಕಾಲೆಳೆದು ,ತಿಳಿಯದ ಗೆಳೆತನಕ್ಕೊಂದು ಸ್ನೇಹದ ಭಾವ ನೀಡಿ ,ಕಡಿಮೆ ಬಂದ ಅಂಕಗಳ ಬೇಸರಕ್ಕೆ ಧೈರ್ಯ ಹೇಳಿ ,ಪ್ರೀತಿಸೋ, ಆಸ್ಥೆ ವಹಿಸೋ ,ಕಾಳಜಿಸೋ ನಿಮಗೊಂದು ಪ್ರೀತಿಯ ಅಪ್ಪುಗೆ.

ಈ ಸ್ನೇಹಿತರ ಸ್ನೇಹ ಮಾತ್ರ ಸ್ನೇಹದ ವ್ಯಾಖ್ಯಾನವ ವ್ಯಾಖ್ಯಾನಿಸಬಲ್ಲದೇನೋ ... 
ಸಾವಿರದ ಈ ಸ್ನೇಹ ಸಾವಿರಾರು ಬಂಧ ಗಳ ಬೆಸೆಯಲಿ ..
ಸ್ನೇಹ ಚಿರಾಯುವಾಗಲಿ .. 






Friday, June 21, 2013

ಪ್ರೀತಿ ಇಲ್ಲದ ಮೇಲೇ .....

ಪ್ರೀತಿಯ ಮುದ್ದು ,

ಬದುಕಿನ ಒಂದು ಹಂತವ ಹತ್ತಿ ಹಿಂತಿರುಗಿದಾಗ ತುಂಬಾ ಕಾಡಿದ್ದ ಸಂಗಾತಿ ನೆನಪಿದು .

ಬಾಳ ದೋಣಿಯಲ್ಲಿ ಅಂಬಿಗನ ಹುಡುಗಾಟದಲ್ಲಿದ್ದಾಗ ಸಿಕ್ಕ ಹುಡುಗ ನೀನು !

ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರದ ನನ್ನಲ್ಲಿ ಅದ್ಯಾಕೋ ಒಂಟಿತನದ ಭೂತ ಕಾಡ ಹತ್ತಿತ್ತು ...ಎಲ್ಲರಂತೆ ನಂಗೂ ಪ್ರೀತಿಸೋ ,ಮುದ್ದಿಸೋ ಮನವೊಂದು ಬೇಕನಿಸತೊಡಗಿತ್ತು ..

ಹುಚ್ಚು ಕನಸು ಕಾಣೋ ವಯಸಲ್ಲೇ ನೀ ನನಗೆ ಪರಿಚಯವಾಗಿದ್ದು ...ಗಂಟೆಗಟ್ಟಲೇ ಹರಟಿದ್ದು ..
ತುಂಬಾ ಕಾಲೆಯುತ್ತಿದ್ದ ಸ್ನೇಹಿತರ ಗುಂಪಲ್ಲಿ ನೀ ಯಾಕೋ ತೀರಾ ಅಪರೂಪನಾಗಿ ಕಂಡೆ ನಂಗೆ . ಆತ್ಮೀಯನಾದೆ ,ಆದರಿಸಿದೆ.ಅದೆಷ್ಟೋ ಮಾತುಗಳಿಗೆ ಕಿವಿಯಾದೆ ,ಪ್ರೀತಿಗೆ ಹೆಸರಾದೆ ,
ನನ್ನ ಬೇಸರಕ್ಕೆ ನೀ ಕೈ ಹಿಡಿದು ನೀಡೋ ಸಾಂತ್ವಾನಕ್ಕೆ ನಾ ಯಾವತ್ತೋ ಕಳೆದು ಹೋದೆ .

ತೀರಾ ಸೌಮ್ಯನಲ್ಲದ ತೀರಾ ಮಾತಾಡೋನೂ ಅಲ್ಲದ ನಿನ್ನ ಮೇಲೆ ಸಣ್ಣದೊಂದು ಒಲವಾಗಿತ್ತಲ್ಲಿ .

ಅವತ್ತದ್ಯಾವುದೋ ಹುಡುಗನ ಹೆಸರ ಹೇಳಿ ರೇಗಿಸಿದ್ದ ನಿನ್ನ ಮೇಲೆ ತೀರಾ ಸಿಟ್ಟು ಬಂದಿತ್ತು ನಂಗೆ .ಈ ಹುಡುಗ ಯಾಕೆ ಇನ್ಯಾರದೋ ಹೆಸರಿಗೆ ತನ್ನ ಹುಡುಗಿಯ ಹೆಸರ ಹೇಳಿದ್ದಾನೆ ಅನ್ನೋ ಕೋಪ ಸೀದಾ ಮನದ ಮಾತನ್ನ ನಿನ್ನೆದುರಿಗೆ ತೆರೆದಿಟ್ಟಿತ್ತು ...ನಿನ್ನನ್ನಿಲ್ಲಿ ಆರಾಧಿಸುತ್ತಿರೋ ಹುಡುಗಿಯನ್ಯಾಕೆ ಇನ್ಯಾರದೋ ಹೆಸರ ಜೊತೆಯಾಗಿಸುತ್ತೀಯಾ "ಲವ್ ಯು ಸ್ಟುಪಿಡ್ " ಅಂತ ಹೇಳಿ ಆಮೇಲೆ ನಾಲಿಗೆ ಕಚ್ಚಿ ಕೊಂಡ ನೆನಪು ನಿನ್ನೆ ಮೊನ್ನೆಯದು ಅನಿಸುತ್ತಿದೆ ಕಣೋ !
ನೀ ನಕ್ಕು ಮುದ್ದಿಸಿದ್ದೆ ನೆನಪಿದ್ಯಾ ನಿಂಗೆ ?

ಆಮೇಲಿನದು ನಂಗಿಂತ ಜಾಸ್ತಿ ಗೊತ್ತಿರೋದು ಪ್ರತಿ ದಿನದ ಸಂಜೆಯಲ್ಲಿ ಮರಳ ತೀರದಲ್ಲಿ ಕೂರುತ್ತಿದ್ದ ಅದೇ ಕಲ್ಲು ಬಂಡೆಗಳಿಗೆ ..
ನಮ್ಮಿಬ್ಬರ ಭಾವಗಳ ಏಕೈಕ ಸಂಬಂಧಿ ಎಂದರೆ ಅದೇ ಇದ್ದೀತು ...
ಆ ತೀರದಲ್ಲಿ ನಿನ್ನೊಟ್ಟಿಗೆ ನಿನ್ನ ಕಿರುಬೆರಳ ಹಿಡಿದು ದಿನವೂ ಕೂರುತ್ತಿದ್ದ ದಿನಗಳ್ಯಾಕೋ ನೆನಪಾಗಿದೆ ಕಣೋ .ಭಾವಕ್ಕೆ ಜೊತೆಯಾಗಿ ,ಬದುಕಿಗೆ ಪಾಲುದಾರನಾಗಿ ಬರುವೆ ಗೆಳತಿ ಅಂತ ನೀ ನೀಡಿದ್ದ ಭರವಸೆಯ ಆ ದಿನಗಳು ನೆನಪಾಗುತ್ತಿವೆ..ಜೊತೆಯಾಗಿ ಸುತ್ತಿದ್ದೆಷ್ಟೋ , ಎದುರು ಕೂತು ಕಣ್ಣಂಚ ಒದ್ದೆಯಾಗಿಸಿದ್ದೆಷ್ಟೋ ,ಪ್ರೀತಿಯಿಂದ ತಲೆ ಸವರಿ ನೀ ಹೇಳಿದ್ದ ಧೈರ್ಯ ,ಕಣ್ಣಲ್ಲಿ ಕಣ್ಣಿಟ್ಟು ಕೊಟ್ಟ ಭರವಸೆ ಈ ಜನ್ಮಕ್ಕಾಗುವಷ್ಟಿದೆ .
ನಮ್ಮಿಬ್ಬರ ಪ್ರತಿ ಭಾವಗಳೂ ಆ ಮರಳ ದಂಡೆಗೆ ಗೊತ್ತೇನೋ ...ಪಾರ್ಕಿನಲ್ಲಿ ಕೂತು ಮನಸೋ ಇಚ್ಚೆ ಹರಟಿದ್ವಿ ಬಿಟ್ರೆ ಅಲ್ಲಿರೋ ಜೋಡಿಗಳ ತರ ನಾವ್ಯಾವತ್ತೂ ಮಾಡಿಲ್ಲ .
ನೀನ್ಯಾವತ್ತೂ ನನ್ನ ತಬ್ಬಿಕೊಂಡಿಲ್ಲ ,ಕೈಯಲ್ಲಿ ಬೆಸೆವ ನಾನಿದ್ದೇನೆ ಜೊತೆ ಅನ್ನೋ ಕೈ,ಹಣೆಯ ಮೇಲೊಂದು ಮುತ್ತು ಬಿಟ್ಟು ಅದರಾಚೆಯ ಯಾವುದನ್ನೂ ನಿರೀಕ್ಷಿಸಿಲ್ಲ !..ನಿನ್ನ ಮೇಲಿನ ನನ್ನ ಹೆಮ್ಮೆ ಜಾಸ್ತಿಯಾಗೋದು ಇಲ್ಲೆ ಕಣೋ ....

ಎಲ್ಲರೆದುರು ಪ್ರೀತಿಯ ಪ್ರದರ್ಶನ ಮಾಡೋ,ಪ್ರೀತಿ ಅಂದ್ರೆ ಅಸಹ್ಯ ಆಗೋ ತರ ಆಡೋ ಅದೆಷ್ಟೋ ಮಂದಿಯೆದುರು ನೀ ಆದರ್ಶನಾದೆ ಅನ್ನೋ ಖುಷಿ ನಂದಾಗಿತ್ತು ಅಲ್ಲಿ !

ಆದರೆ ಇವತ್ಯಾಕೋ ನೀ ನನ್ನ ಕನವರಿಕೆಯ ಕನಸಾಗಿ ಕಾಡ ಬಂದೆ ,ಏನನ್ನೋ ಹುಡುಕುತ್ತಾ ಇದ್ದಾಗ ಸಿಕ್ಕ "ಮಿಸ್ ಯು ಸ್ವೀಟ್ ಹಾರ್ಟ್ "ನೀ ನನಗೆ ಕೊಟ್ಟಿದ್ದ ಮೊದಲ ಗ್ರೀಟಿಂಗ್ ನಿನ್ನಲ್ಲೇ ಕಳೆದುಹೋಗಿದ್ದ ನನ್ನ ಹುಡುಕ ಹೊರಟಿತ್ತು ...
ಬಿಡು ,ನೀನಿಲ್ಲದೆಯೂ ಇರಬಲ್ಲ ನಂಗೆ ನೆನಪನ್ನೂ ಕೊಡವಿ ಎದ್ದು ಬರೋದು ಅಷ್ಟು ಕಷ್ಟವಾಗಲಾರದು !
ಆದರೆ ಮುದ್ದು (ಕ್ಷಮಿಸು ನೀ ಇನ್ಯಾರದೋ ಮುದ್ದು ಆದ್ರೂ ನಂಗೆ ನೀನ್ಯಾವತ್ತೂ ನನ್ನ ಮುದ್ದು ) ಕಾರಣವೇ ಹೇಳದೆ ಎದ್ದು ಹೋದೆಯಲ್ಲೊ ನೀ .
ಭಾವಗಳ ಹೊಯ್ದಾಟವನ್ನ ನಿನ್ನಲ್ಲಿ ನಾನವತ್ತೇ ಗುರುತಿಸಿದ್ದೆ !...ಮೆಸೇಜ್ ಗೆ ಬರದ ರೀಪ್ಲೈ ,ಅಮೇಲೊಮ್ಮೆ ನೀ ಕೇಳೋ ಅರ್ಥವಿಲ್ಲದ ಪ್ರಶ್ನೆಗಳಾದ "ನಾ ಇರದಿದ್ದರೆ ನೀ ಏನು ಮಾಡ್ತೀಯ ?, ನನ್ನನ್ನ ನೆನಪಿಂದಳಿಸಿ ಬಿಡೆ ಹುಡುಗಿ "ಅನ್ನೋ ಅದೆಷ್ಟು ಅಸಂಬದ್ದ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ..ನಿನ್ನ ನಿರ್ಧಾರಗಳ ಅರಗಿಸಿಕೊಳ್ಳೋ ಶಕ್ತಿ ನನಗವತ್ತಿರಲಿಲ್ಲ ನಿಜವಾಗ್ಯೂ ...


ಕಾಡಿಸಿ ಕಾಡಿಸಿ ಕೇಳಿದ್ದೆ .ಮನ ಹಗುರಾಗಿಸಿ ಅತ್ತು ಬಿಡೋ ನಾನಿದ್ದೀನಿ ಜೊತೆಗೆ ಅಂತದೆಷ್ಟೋ ಸಲ ಹೇಳಿದ್ದೆ .ನಂಗೇನು ಗೊತ್ತು ಶಾಶ್ವತ ಕಣ್ಣೀರೊಂದನ್ನು ನನಗೇ ಕೊಟ್ಟು (ಬಿಟ್ಟು )ಹೋಗೋ ಹುನ್ನಾರವಿದು ಅನ್ನೋದು ....!!

ಯಾಕೋ ಸಪ್ಪಗಿದ್ದೀಯಾ ? ಅನ್ನೋ ನನ್ನ ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಯೆ ಉಳಿಸಿ ,ನೀನಿಲ್ಲದ ಜಗತ್ತೇ ಇಲ್ಲ ಅನ್ನೋ ಮನವೊಂದನ್ನು ಪೂರ್ತಿಯಾಗಿ ಬಿಟ್ಟು ಹೊರಟು ಹೋದೆ ನೀನು ..

ಕೊನೆಗೆ ನೀ ಎದ್ದೇ ಹೋದೆ ,ಮನಸ್ಸಿಂದಲ್ಲ ..ಕನವರಿಕೆಯ ಕನಸಿಂದ ಮಾತ್ರಾ

ನೆನಪುಗಳನ್ನಿಲ್ಲೇ ಬಿಟ್ಟು ಹೋಗಿದ್ದೀಯಲ್ಲೋ ಹುಡುಗಾ..ಮರೆತು ಹಾಗೇ ಹೋದೆಯೋ ಅಥವಾ ನಿನ್ನ ಪ್ರೀತಿಸಿದ ತಪ್ಪಿಗೆ ನನ್ನನ್ನದು ಕೊನೆಯ ತನಕ ಕಾಡಲಿ ಅಂತ ಬೇಕಂತಲೇ ಬಿಟ್ಟು ಹೋದೆಯೋ ನಾ ಅರಿಯೆ ...

ನೀ ನನಗೆ ಸಿಕ್ಕ ಭ್ರಮೆಯಲ್ಲಿ ಜಗತ್ತೇ ನನ್ನದು ಅಂತ ಬೀಗುತ್ತಿತ್ತಲ್ಲೋ ಈ ಹುಚ್ಚು ಮನಸ್ಸು !ಪಾಠವೊಂದ ಕಲಿಸಿದೆ ನೀ ..ಕೊನೆಯ ತನಕ ಮರೆಯದ ಅತೀ ಹತ್ತಿರವಾದ ಪಾಠವದು !ಮನ ಮಾತ್ರ ಯಾರನ್ನೂ ನಿನಗಿಂತ ಜಾಸ್ತಿ ಪ್ರೀತಿಸದಿರೆ ಹುಚ್ಚಮ್ಮ ಅಂತ ಪ್ರತಿ ದಿನ ನೆನಪಿಸುತ್ತೆ ...ನಾ ನಿನ್ನ ಪ್ರೀತಿಸಿದ ಖುಷಿಗೆ ನನ್ನದೇ ಮನ ನನ್ನ ಖುಷಿ ಕಸಿದುಕೊಂಡಂತನಿಸುತ್ತೆ ಕ್ಷಣವೊಂದಕ್ಕೆ !
 
 
ಅದಕ್ಕೂ ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು !
ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ ?
ನೀನೆ ಕಟ್ಟಿದ್ದ ಕನಸ ಮನೆ ಮಗುಚಿ ಬಿದ್ದಾಗ್ಲೂ ಒಂದಿನಿತು ದುಃಖವಾಗ್ಲಿಲ್ವಾ ?
ಅಥವಾ
 ಮುಖವಾಡದ ಪ್ರೀತಿ ಅದಾಗಿತ್ತಾ ?
ನಿಜ ಹೇಳು ..
ಹಾರಿಕೆಯ ಉತ್ತರ ಕೇಳಿ ಕೇಳಿ ಮನ ಬಿಕ್ಕುತ್ತಿದೆ ,ನೀ ನಡೆದ ಈ ಮನಸ್ಸು ಯಾರಿಗೂ ಕಾಣದಂತೆ ಆತ್ಮಹತ್ಯೆ ಮಾಡಿಕೊಂಡು ತುಂಬಾ ದಿನಗಳಾಯ್ತು !...
ಯಾರದೋ ಎದೆಯಲ್ಲಿ ಕನಸ ಸೌಧವನ್ನ ಕಟ್ಟಿ ಒಮ್ಮೆಗೇ ಅದನ್ನ ದ್ವಂಸ ಮಾಡಿ ಹಿಂದೆ ತಿರುಗಿಯೂ ನೋಡದೇ ಹೋಗೋ ಅಷ್ಟು ಕೆಟ್ಟವನಲ್ಲ ನನ್ನ ಹುಡುಗ ...ಯಾವುದೋ ಹೇಳಲಾಗದ ಅನಿವಾರ್ಯತೆಗೆ ಕಟ್ಟುಬಿದ್ದು ನೀ ಹೊರನಡೆದೆಯೇನೋ .ನನಗರ್ಥವಾದೀತು ಕಣೋ ....
ಯಾಕಂದ್ರೆ ನೀ ನನ್ನ ಪ್ರೀತಿ ..

ಬಾಳ ತೆಪ್ಪ ಹುಟ್ಟಿಲ್ಲದೇ ಹೊಯ್ದಾಡುತ್ತಿದ್ದಾಗ ಹುಟ್ಟು ಹಾಕಿದ್ದು ನೀ ಬಿಟ್ಟು ಹೋದ ಮಧುರ ನೆನಪುಗಳೇ..ಸುನಾಮಿಯಾಗದೆ ಮೃದು ಮಧುರ ನೆನಪುಗಳ ಖುಷಿಸೋ ಅಲೆಯಾಗಿ ದಡ ಸೇರಿಸಿತು ನನ್ನ ...
ಇದೇ ನಾ ನನ್ನೊಟ್ಟಿಗೆ ಮಾಡಿಕೊಂಡ ಕಾಂಪ್ರಮೈಸ್ ...

ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ ..
ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ .

ಆದರೆ ನನ್ನ ಯಶಸ್ಸಿಗೆ ಸಂಪೂರ್ಣವಾಗಿ ಖುಷಿಸೋ ಒಂದು ಜೀವದ ಕೊರತೆ ಮತ್ತೆ ಕಾಡುತ್ತಿದೆ ನನ್ನ ,ಎದೆಯ ನಿಟ್ಟುಸಿರಾಗಿ, ಬೇಸರದ ಮುಸ್ಸಂಜೆಯಾಗಿ,ಮನದ ಕಣ್ಣೀರಾಗಿ, ಅದೇ ಮರಳು ದಂಡೆಯ ಬಂಡೆಯಾಗಿ ,ಕೈ ತಾಕೋ ಅಲೆಯಾಗಿ .
ಆದರೇ ನಾನಿನ್ಯಾವತ್ತೂ ಬೇರೊಬ್ಬ ಅಂಬಿಗನ ಹುಡುಕಾಟ ಮಾಡಲಾರೆ ..

ಯಾಕಂದ್ರೆ ನಾ ನೀನಲ್ಲ !

ನನ್ನ ಪ್ರೀತಿ ಸತ್ತಿಲ್ಲ ,ಒಲವು ಕವಲೊಡೆಯಲ್ಲ ..
ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ .

ಇಷ್ಟು ಸಾಕು ನಂಗೆ ..ನಿನ್ನ ನೆನಪುಗಳೊಟ್ಟಿಗೆ ಬದುಕ ಸವೆದೇನು ಹೊರತು ಹುಡುಕಿ ಬಂದ ಬೇರೊಂದು ಪ್ರೀತಿಯನ್ನ ಅನುಮೋದಿಸಲಾರೆ ನಾ ...ಅನುಸರಿಸಲಾರೆ

ನಾನಿವತ್ತೂ ತಪ್ಪಿಲ್ಲದ ನನ್ನ ತಪ್ಪಿಗೆ ಮಂಡಿಯೂರಿ ಕ್ಷಮೆ ಕೇಳುತ್ತಿದ್ದೇನೆ ನಿನ್ನಲ್ಲಿ .ನೀ ನನ್ನವನಾಗದಿದ್ದರೂ ನನ್ನ ಪ್ರೀತಿಯೊಂದಿಗಿನ ಮಧುರ ಭಾವಕ್ಕೆ ಜೊತೆಯಾಗಿದ್ದೆ ಅನ್ನೋ ಕಾರಣಕ್ಕಾದರೂ ಒಮ್ಮೆ ಕ್ಷಮಿಸುಬಿಡು ನಿನ್ನ ಪ್ರೀತಿ ಮಾಡಿದ್ದ ,ಮಾಡುತ್ತಿರೋ ನಿನ್ನದೇ ಹುಡುಗಿಯನ್ನ...


(ಕಳಕೊಂಡ ಪ್ರೀತಿಯಲ್ಲಿ ಅವನದೇ ತಪ್ಪು ಅನ್ನೋಕೆ ಒದ್ದಾಡುತ್ತಿರೋ ,ತಪ್ಪಿಲ್ಲದ ತನ್ನನ್ನೂ ತಪ್ಪಾಗಿಸಿಕೊಂಡು ಕ್ಷಮೆ ಕೇಳುತ್ತಿರೋ ಹುಡುಗಿಯ ಮಾತಾಗಿ ....
ಪ್ರೀತಿಸೋ ಜೀವವೊಂದನ್ನ ಕಳಕೊಳ್ಳದಿರು ಗೆಳೆಯ ...ಇಂತದ್ದೇ ಪ್ರೀತಿ ಎಲ್ಲರಿಗೂ ದಕ್ಕಲ್ಲ ...ನಿನಗೆ ದಕ್ಕಿದ್ದ ಪ್ರೀತಿಯನ್ನ ನೀ ದೂರ ಮಾಡಿದೆ ...ಮನವೊಂದಕ್ಕೆ ಮೋಸ ಮಾಡಿದ ಪಾಪಪ್ರಜ್ಞೆಯಲ್ಲಿ ಅದ್ ಹೇಗೆ ಬದುಕುವೆಯೋ ನೀ .
ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳವನಾಗು ನೀ ...ಕ್ಷಮಿಸಿ ಅಪ್ಪಿಯಾಳು ...)


ಶ್ರೀಕಾಂತಣ್ಣನ ಈ ಭಾವವನೂ ನೋಡಿಬಿಡಿ ಒಮ್ಮೆ

http://kantha-themagnet.blogspot.in/2013/06/blog-post.html

ಥಾಂಕ್ಸ್ ಶ್ರೀಕಾಂತಣ್ಣ ,ಮೂಡಿದ್ದ ಗೊಂದಲವೊಂದನ್ನ ಸಲೀಸಾಗಿ ಬಗೆಹರಿಸಿದ್ದಕ್ಕೆ :)

 

Friday, June 14, 2013

ನಾವಿಗನ ಹುಡುಕಾಟದಲ್ಲಿ :)






ಸಾಗರದಾ ಬೊರ್ಗರೆತ ,
ಅಲೆ ಅಲೆಯ ನೆಪ ಮಾತ್ರ.
ನೆಪ ಮಾತ್ರಕೀ ಮಿಂಚು
ಮನಮುಟ್ಟುವಾ ಸಂಚು.

ಮುಂಜಾವಿನೀ ಮಂಜು
ಮುಸ್ಸಂಜೆಯಾಗಾಸ .
ತೀರದಲ್ಲಾಯಾಸ ,
ಆಗದಿರಲಿ ವ್ಯತ್ಯಾಸ.

ನಾ ಬರದಿರಲ್ಲಿ
ಕಾಡಿ ಬೇಡದಿರೆನ್ನ ನಿನ್ನೊಳೊಂದಾಗುವಂತೆ .
ನಾನೇ ನಿನ್ನಲ್ಲಿ ಬಂದೆ
ಅಲೆಯಲ್ಲಿ ಬೆರೆತು ನಿನ್ನೊಳೊಂದಾದಂತೆ .

ನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.

ಬಾಳ ಹಾದಿಯಲಿ ಒಂಟಿ ಪಯಣದಲಿ
ಒಬ್ಬಂಟಿ ನಡಿಗೆಯ ಬೇಸರ .
ಎಲ್ಲಿರುವೆ ಗೆಳೆಯಾ ?
ಕೈ ಹಿಡಿದು ನಡೆಸೋಕೆ ಬರುವೆಯಾ ಇನಿಯಾ?

ದೂರ ತೀರದ ಯಾನದಲಿ,
ಬಾಳ ದೋಣಿಯ ಪಯಣದಲಿ ,
ಹುಡುಕಿರುವೆ ನಾವಿಗನಾ,
ಈ ಹಡಗ ಯಜಮಾನನಾ.

 
ಫೋಟೋ ಕ್ರೆಡಿಟ್ಸ್ : ಬಾಲಣ್ಣ (ನಿಮ್ಮೊಳಗೊಬ್ಬ ಬಾಲು )
ಧನ್ಯವಾದ ಬಾಲಣ್ಣ .ಎಲ್ಲರನ್ನೂ ನೆನಪ ಅಲೆಯಲ್ಲಿ ತೇಲಿಸೋ ದಡದಲ್ಲಿರೋ ಹಾಯಿಯೊಂದರ ಸುಂದರ ಚಿತ್ರಕ್ಕೆ

 

Thursday, June 6, 2013

ಮಳೆಯ ಹುಡುಗಿಯ ಮಾತಾಗಿ...

                                               ನನ್ನೂರ ಮಳೆಯ ನೆನಪಲ್ಲಿ

ಬಿಡದೇ ಸುರಿವ ಜಿಟಿ ಜಿಟಿ ಮಳೆ ,ಮನೆಯ ತಾರಸಿಯಲ್ಲಿ ನಿಂತು ಮಳೆಹನಿಗಳಲ್ಲೇನನ್ನೋ ಹುಡುಕೋ ಹುಚ್ಚು ,ಹಾಯಿ ದೂರ ಕಾಣೋ ಹಸಿರ ಸೊಬಗು ,ಮಂಜಿನ ಅಂಗಳ ,ಮುಂಜಾನೆಯ ಮಬ್ಬು ,ಮಲೆನಾಡ ಮಳೆ ಅದು ....ವರ್ಷದಲ್ಲಾರು ತಿಂಗಳು ಬಿಡದೇ ಸುರಿವ ಮಳೆ...

ಮಳೆಗಾಲದ ಆ ಸಂಜೆಗಳಲ್ಲೇನೋ ಸೊಗಸಿತ್ತು .ಮಳೆಯಲ್ಲಿ ನೆನೆಯೋ ಹುಚ್ಚು ತುಸು ಜಾಸ್ತಿಯೇ ಇತ್ತು .!

ಜೊತೆಯಲ್ಲಿದ್ದಾಗ ಕಾಡದ ದೂರವಾದ ಮೇಲೆ ಕಾಡಿಸಿ ಕಾಡಿಸಿ ಕಾಡೋ ಭಾವಗಳ ಮೇಲೆ ತುಸು ಜಾಸ್ತಿ ಅನಿಸೋ ಅಷ್ಟು ಬೇಸರವಿದೆ ..

ವರ್ಷದ ಹಿಂದಿದ್ದ ಮಳೆಗಾಲದ ಈ ಮಳೆ ಮತ್ತೆ ಮತ್ತೆ ದೂರದ ಮನೆಯ ನೆನಪನ್ನ ಹಸಿಯಾಗಿಸಿದೆ ...

ಕನಸುಗಳ ಹುಸಿಯಾಗಿಸಿದೆ....

ಇಂತದ್ದೇ ಮಳೆ...ಕಾರ್ಮೋಡದ ಸಂಜೆಯ ತಾರಸಿಯಲ್ಲಿ ನಿಂತು ಇಷ್ಟಪಡೋ ಅದೇ ಮಳೆಹನಿಗಳಿವು. ಮಳೆಯಲ್ಲಿ ಜೊತೆಯಾಗಿ ಕುಣಿಯೋಕೆ ತಮ್ಮ ,ತಲೆಯೊರೆಸಿ ಮುದ್ದು ಮಾಡೋ ಅಮ್ಮ, ಪ್ರೀತಿ ಬೆರೆಸಿದ ಬೆಚ್ಚಗಿನ ಕಾಫಿ ಮಾಡಿಕೊಡೋಕೆ ದೊಡ್ಡಮ್ಮ ,ಮಳೆಯಲ್ಲಿ ನೆಂದು ಹುಡುಗಾಟವಾಡ್ತೀರ ಅಂತ ಮುಖ ಊದಿಸೋ ಅಪ್ಪ,ಸ್ವೆಟ್ಟರ್ ಒಳಗೊಂದು ಜಾಗ ಕೊಡೋ ಅಜ್ಜ, ಸಂಜೆಗಂತಾನೇ ಮೀಸಲಿದ್ದ ಹಪ್ಪಳ ಸಂಡಿಗೆ,ಕಂಬಳಿ ಒಣಗಿಸೋಕೆ ಮಾಡಿರೋ ಒಲೆ , ಕರೆಂಟ್ ಇಲ್ಲದ ರಾತ್ರಿಗಳಲ್ಲಿ ಒಟ್ಟಿಗೆ ಕೂತು ಹರಟೋ ಪ್ರೀತಿಯ ಮನೆಮಂದಿ,ದೊಡ್ಡ ಮನೆಯ ಪ್ರೀತಿಯಲ್ಲಿ ಸಿಗೋ ದೊಡ್ಡ ಪಾಲು ..ಮಳೆಗಾಲದ ರಾತ್ರಿಗಳಲ್ಲಿ ತಾನಾಗೇ ಆಗೋ ಕ್ಯಾಂಡಲ್ ಲೈಟ್ ಡಿನ್ನರ್ ,

ಅವತ್ತಿದ್ಯಾವುದೂ ಕಿಂಚಿತ್ತೂ ಕಾಡಿರಲಿಲ್ಲ ನನ್ನ! .

ಅನುಭವದ ಮಾತು ದೂರಾ ದೂರ...!

ಮತ್ತೆ ಕರಿತೀದೆ ದಡದ ಇನ್ನೊಂದು ತೀರ..!

ವಾರವಾದರೂ ಬರದ ಕರೆಂಟ್ ಬಗೆಗೊಂದು ಬೇಸರ,ಟೀವಿ ನೋಡೋಕೂ ಬಿಡದ ಗುಡುಗಿನ ಬಗೆಗೊಂದು ಹೇಳಲಾಗದ ಸಿಟ್ಟು ,ಪಿಯು ಮುಗಿದ ನಾಲ್ಕು ತಿಂಗಳ ಸಹ್ಯವಾಗದ ರಜಾ,೪ ಬಾರಿ ಹೇಳಿದ್ದ ವಟ ವಟ ಸುದ್ದಿಗಳನ್ನ ಇನ್ನೊಮ್ಮೆ ಹೇಳೋಕಂತ ಶುರು ಮಾಡಿದ್ರೆ "ಪುಟ್ಟಿ ಪ್ಲೀಸ್ "ಅಂತ ಮಾತಾಡೋಕೇ ಬಿಡದ ಅಮ್ಮ ದೊಡ್ಡಮ್ಮ ,ಅದೆಷ್ಟೋ ಸಲ ಓದಿ ಮುಗಿದಿದ್ದ ಅದೇ ಕಾದಂಬರಿಗಳು,ಇರದ ನೆಟ್ ವರ್ಕ್ ನಿಂದಾಗಿ ಕಾಣೆ ಆಗಿದ್ದ ಸಿಸ್ಟಮ್ ,ಫೇಸ್ಬುಕ್,ಮೊಬೈಲ್, -ಇವಷ್ಟೇ ವರ್ಷದ ಹಿಂದಿನ ಇಂತದ್ದೇ ಮಳೆಗಾಲದಲ್ಲಿ ಕಾಡೋ ಬೇಸರಗಳಾಗಿತ್ತು.

ಯಾಕೋ ಗೆಳೆಯ ,ಅಲ್ಲಿಂದ ಎದ್ದು ಬಂದ ಮೇಲೂ ಅಲ್ಲಿಯ ಭಾವ ತೀರಾ ಕಾಡುತ್ತೆ ನನ್ನ?

ಇದೂ ಮಲೆನಾಡೇ ...ಇಲ್ಲಿಯೂ ಅಂತದ್ದೇ ಮಳೆ ..ಮಳೆಯಲ್ಲಿ ನೆನೆಯೋ ಅದೇ ಹುಚ್ಚಿದೆ ..

ಇವತ್ತಿನ ಮಳೆಯಲ್ಲಿ ಖುಷಿ ಅಂದ್ರೆ ಟೆರೇಸ್ನಲ್ಲಿ ನಿಂತು ಹಾಕೋ ಒಂದಿಷ್ಟು ಸ್ಟೆಪ್ಸ್, ಮಳೆಯಲ್ಲಿ ಮಜಾ ತರೋ ರೈಡ್ craze ,ಮಳೆ ಹನಿಗಳ ಜೊತೆ ತಿನ್ನೋ ಗೋಲ್ ಗಪ್ಪಾ,,ನಾವೇ ಮಾಡಿಕೊಂಡ ಬೆಚ್ಚಗಿದೆ ಅಂದುಕೊಂಡು ಕುಡಿಯೋ ಕಾಫಿ,ಯಾವುದೂ ಅಮ್ಮ ಮಾಡಿಕೊಡೋ ಪಕೋಡಕ್ಕೆ ,ಮನೆಯಲ್ಲಿ ನೆನೆಯೋ ಮಳೆಗೆ ಪ್ರತಿಸ್ಪರ್ಧಿಯಾಗಲ್ಲ!

ಕಿಟಕಿಯಲ್ಲಿ ನಿಂತು ನೋಡೋ ಮಳೆಹನಿಗಳು ಕಣ್ಣ ಹನಿಗಳಂತನಿಸಿ ಕಿಟಕಿ ಮುಚ್ಚೋ ಅಷ್ಟು ಬೇಜಾರು,

ಹನಿಗಳ ಜೊತೆ ನೆನಪಾಗೋ ಊರ ಮಳೆ,ಮನೆಯ ಮಳೆ,

ಮಳೆಗೆ ಮನೆಯ ಮಾಡು ಸೋರದೇ ಮನೆಯವರ ಮನಸ್ಸು ಸೋರುತ್ತಿದ್ದುದರ ಬಗೆಗೊಂದು ಬೇಸರ....

ಮಳೆಗೆ ನೆನಪಾಗೋ ಒಲವ ಹುಡುಗ ...ಅದೇ ಕ್ಷಣಕ್ಕೆ ನೆನಪಾಗೋ ಅವನ ಪ್ರೀತಿ ...

ಅವನಿಗೆ ಪ್ರೀತಿ ನಿರಾಕರಿಸಿದ ಭಾವಗಳೇ ಇರದ  ಹುಡುಗಿ !!  ,ಇವನಿಗೆ ಭಾವಗಳೇ ಈ ಹುಡುಗಿಯೇನೋ ಅಂತಿಪ್ಪ ಸಣ್ಣ ಸಂಶಯ !!

ಒಟ್ಟಿನಲ್ಲಿ ಅಲ್ಲಿಂದ ಬೀಳೋ ಮಳೆ ಹನಿಗಳು ನೆಲ ತಾಕೋ ತನಕ ನನ್ನಲ್ಲೇ ಆಗೋ ಒಂದಿಷ್ಟು ದ್ವಂದ್ವಗಳು,ಗೊಂದಲಗಳಿಗೆ ಉತ್ತರ ಹುಡುಕ ಹೊರಟು ,ಸಮಾಧಾನಿಸದ ಭಾವಗಳಿಗೆ !

ಮತ್ತದೇ ನೀರವತೆಯ ಮೌನದ ಸಂಜೆಯಲ್ಲಿ ಬಿಡದೇ ಸುರಿವ ಮಳೆಯಲ್ಲಿ ಬೆಚ್ಚಗಿನ ನೆನಪೊಂದನ್ನ ಹುಡುಕುತ್ತಿರೋವಾಗ ಸಿಕ್ಕ ಕಾಡೋ ನೆನಪೊಂದ ಎತ್ತಿಕೊಂಡು.....






 


ಓ ಮನಸೇ ...

ನೀ ಹೀಗೇಕೆ ..

ಬೇಡವೆಂದರೂ ಬಂದು ಕಾಡುತ್ತೀಯಲ್ಲೇ ,

ಕಾಲೆಲೆಯೋ ಗೆಳತಿಯಾಗಿ,

ನೆನಪ ಹುಡುಗನಾಗಿ,

ಬೆಚ್ಚಗಿನ ಕನಸಾಗಿ,

ತಾಗೋ ಹತಾಶೆಯಾಗಿ....

ಕಾಡದಿರು ನನ್ನ ನೀ...

ನಾ ನಿನ್ನ ಇನಿಯನಿಲ್ಲ ...

ಬೇಡವೆಂದರೂ ಬಂದು ಬೆಚ್ಚಗಿನ ಗೂಡೊಂದ ಕಟ್ಟಿ ,ಮನದಲ್ಲೊಂದು ಮಹಲು ಮಾಡೋ ಬೆಚ್ಚಗಿನ ಕಾಡೋ ನೆನಪುಗಳ ಜತನದಿಂದ ಎತ್ತಿಡಲು ಸೋತೆನಾ ನಾ??

Sunday, June 2, 2013

ಮಳೆಯಲ್ಲಿ ತೋಯ್ದ ಮನದ ನೆನಪು...



 ಕಪ್ಪಾದ ನೀಲ ಬಾನು ....ಆಗಸವನ್ನೇ  ಮರೆ ಮಾಚ ಬರುತ್ತಿರೋ ಕಾರ್ಗತ್ತಲೆಯ ಕೂಪ ...ಮಟ ಮಟ ಮಧ್ಯಾಹ್ನ ಕವಿದ ಕಾರ್ಮೋಡ ..

ಸರಿಯದೇ ಹೋದ ಮೋಡ...ಮನಕ್ಕೂ ಹಿಡಿದ ಜಡ ....ಕಸಿವಿಸಿ ಮಾಡುತಿರೋ ಕಾರ್ಮೋಡ

ಅವಳೂರಲ್ಲೂ ಜಿಟಿ ಜಿಟಿ ಮಳೆ ..ಅವಳ ಮನಸ್ಥಿತಿಯೂ ಆ ಮಳೆಯೊಟ್ಟಿಗೆ ಸ್ಪರ್ಧೆಗೆ ನಿಂತಂತೆ ಭಾಸ ...
ಮಂಜು ಮಂಜಾದ ಎದುರಿಗಿರೋ ಸವೆಯದ ಹಾದಿಯ ಒಂಟಿ ಪಯಣಿಗಳಾಗಿ...
ದುಸ್ತರ ಹಾದಿಯಲ್ಲಿ ನಿರ್ಭೀತ ಗಾಂಭಿರ್ಯದೊಡಗೂಡಿ ...
ಒಂದಿಷ್ಟು ಅವಳದೇ ನೆನಪುಗಳ ಒಡತಿಯಾಗಿ ...

ನೆನಪಾದದ್ದು ಆವತ್ತಿನ ಇಂತದ್ದೇ ಮಳೆ ! ಅದೇ ಮಳೆಯಲ್ಲಿನ ಅವಳದೇ ಭಾವದಲ್ಲವಳು ಕಳೆದೇ ಹೋಗಿದ್ದಾಳೆ ..

ಮಳೆಯಲ್ಲಿ ತೋಯುತ್ತಾ ಮನೆ ಸೇರೋ ಧಾವಂತದಲ್ಲಿರೋ ಹುಡುಗಿಗೆ ಯಾರೋ ಕೊಡೆ ಹಿಡಿದಿದ್ದರು ..ಹಿಂತಿರುಗಿ ನೋಡೋಕೂ ಸಂಕೋಚವಾಗಿ ಬಿರ ಬಿರನೆ ಹೆಜ್ಜೆ ಕಿತ್ತಿದ್ದ ಹುಡುಗಿ ಅವಳು .
ಆಮೇಲೊಮ್ಮೆ ಎದುರು ಸಿಕ್ಕ ಹುಡುಗನ ಪರಿಚಯದ ನಗು ಮೂಡಿಸಿದ್ದ ಗೊಂದಲ.. ...ದಿನವೂ ಮನೆಯ ಹಾದಿಯಲ್ಲಿ ಸಾಥ್ ನೀಡೋ ಅದೇ ಗೆಳೆಯ ...ಪರಿಚಯ ಸ್ನೇಹವಾಗಿ ಪ್ರತಿ ದಿನದ ಸಂಜೆಗಾಗಿ ಕಾಯುತ್ತಾ ಕೂರೋ ದಿನಗಳು ..
ಹಂಚಿಕೊಂಡ ಅದೆಷ್ಟೋ ಬೇಸರಗಳು ,ಜೊತೆಯಾದ ಕೈ ಹಸ್ತ ,ನಡುಗುತ್ತಾ ಸಾಗೋ ದಾರಿಯಲ್ಲಿ ಅವ ನೀಡಿದ ಬೆಚ್ಚಗಿನ ಅಪ್ಪುಗೆ ಅವಳಲ್ಲೊಂದು ಭರವಸೆ ನೀಡಿತ್ತು ...ಅವನಾದರೂ ಜೊತೆಯಾದಾನು ಬಾಳ ದೋಣಿಯಲ್ಲಿ  ದಡ ತಲುಪೋ ಜೊತೆಗಾರನಾಗಿ ..ಇಂತದ್ದೇ ಕನಸುಗಳು ..
.
ನೆನಪಲ್ಲಿ ಮಾತ್ರ ಮಳೆ ಅಂದ್ರೆ ಭಯ ಹುಟ್ಟಿಸಿತ್ತು ....ಕತ್ತಲ ನೀರವತೆ ಅವಳಿಗೆ ಬೇಕಿರದ ಅವನ ನೆನಪಿಸುತ್ತಿತ್ತು.....
ಮಳೆಯ ದಿನಗಳು ಸಹ್ಯವಾಗದೇ ,ಸಹಿಸಲೇ ಬೇಕಾಗಿರೋ ಅನಿವಾರ್ಯತೆಯನ್ನು ನೆನೆದು ...ಒಂದಿಷ್ಟು ದುಗುಡವ ಹೊತ್ತ ಅನು ದಿನದ ಮಳೆಯ ದಾರಿಯ ಪಯಣ ಸಾಗಿತ್ತು

ಒಂದಿಷ್ಟು ಇಷ್ಟವಾಗದ ನೆನಪುಗಳ ತೇರಲ್ಲಿ ಅವಳೊಂಟಿ ಅನಿಸುತ್ತಿರುವಾಗಲೇ ಎದುರಾದ ಮನೆಯಿಂದಾಗಿ ನೆನಪುಗಳೂ ವಿರಮಿಸಿದ್ದವು ...
ಭಾರವಾದ ಉಸಿರ ಜೊತೆ ಮನೆಯೊಳ ಬಂದರೆ ಅಲ್ಲಿಯೂ ಅವಳನ್ನ ಆಮಂತ್ರಿಸಿದ್ದು ಕತ್ತಲು ...ಹಾಸಿಗೆ ಹಿಡಿದ ಅಮ್ಮ ,ಯಾವ ಗೋಳೂ ತನಗೆ ಸಂಭಂದಿಸಿದ್ದೇ ಅಲ್ಲಾ ಅಂತಿರೋ ಅಣ್ಣ ...ಆದರೂ ಬದುಕ ಬಗೆಗಿನ ಅವಳ ಅದೇ ವ್ಯಾಮೋಹ ಅವಳನ್ನ ಬದುಕಿಸಿದ್ದು ....ಯಜಮಾನನಿರದ ಮನೆಯ ಎಲ್ಲಾ ಜವಾಬ್ದಾರಿಗಳ ಒಡತಿಯಾಗಿ ಕತ್ತಲ ಆ ಒಂಟಿ ಪಯಣವನ್ನೂ ಖುಷಿಸೋ ಅಷ್ಟು ಪ್ರೀತಿ ಅವಳಿಗೆ ಆ ಬದುಕ ಮೇಲೇ !
ಆದರಲ್ಲಿ ಬದುಕ ಪ್ರೀತಿಯನ್ನ ಇಮ್ಮಡಿಸ ಬಂದ ಹುಡುಗ ಅದೇ ಪ್ರೀತಿಯನ್ನ ಕೊಂದು ಹೋದದ್ದು ಮಾತ್ರ ದುಸ್ತರ ... ಸಂಜೆಯ ಕೆಲಸವನ್ನ ಮುಗಿಸಿ ಪ್ರತಿದಿನವೂ ಕಣ್ಣೀರಾಗೋ ಅಮ್ಮನನ್ನ ಸಾಂತ್ವಾನಿಸಿ ಮುದ್ದಿಸಿ ತನ್ನ ರೂಮನ್ನ ಸೇರಿದರೇ ಅವತ್ತವಳು ತೃಪ್ತಳು ...


ಇವತ್ತಿನ ಮಳೆಯಲ್ಲಿ ಅವನ ಮುಖ ಮತ್ತೆ ಮತ್ತೆ ಕಾಡುತ್ತಿತ್ತು ...ತುಂಬಾ ದಿನದಿಂದ ಮೂಲೆಯಲ್ಲಿರಿಸಿರೋ ನೆನಪನ್ಯಾಕೋ ಅಪ್ಪಿ ಮುದ್ದಾಡಬೇಕನಿಸಿ ಬೇಗನೆ ರೂಮ್ ಸೇರಿದ್ದಳು ...ಕಣ್ಣಂಚಲ್ಲಿ ಜಾರದ ಹನಿಯನ್ನ ಜೋಪಾನ ಮಾಡಿ ಮತ್ತೆ ನೆನಪುಗಳಿಗೆ ಜಾರಿದ್ದಳು  ಹುಡುಗಿ .


 

ಹೌದು ಅವನವಳ ಒಲವ ಹುಡುಗ....ಪ್ರೀತಿಸಿ ,ಕಾಳಜಿಸಿ ,ಜೊತೆಯಾಗಿ ನಾನಿದ್ದೀನಿ ಅಂತ ಸಾಂತ್ವಾನಿಸಿದ ಹುಡುಗ ...
ಕನಸ ಹುಡುಗ ಎದುರು ಬಂದ ...ಈಗ ಬರಿಯ ನೆನಪಾಗಿ ಕಾಡ ಹತ್ತಿದ್ದಾನೆ !...ಅಷ್ಟು ಪ್ರೀತಿ ಮಾಡೋ ಅವ ಯಾಕೇ ಅದೇ ಒಂಟಿ ದಾರಿಯಲ್ಲಿ ಒಬ್ಬಂಟಿಯನ್ನಾಗಿಸಿ ಸರಿದು ಹೋದ..??.ಇದೆಷ್ಟನೇ ಬಾರಿಯೋ ಏನೋ ಇದೆ ಪ್ರಶ್ನೆಯನ್ನವಳು ಕೇಳಿಕೊಳ್ಳುತ್ತಿರುವುದು ...ಕಣ್ಣ ಮುಂದೆದೆ ಆ ಒಲವ ಪರಿ .ಪ್ರೀತಿಯ ಪರವಶೆ ,ಕಾಳಜಿಯ ಕೈ,ಬದುಕ ಸ್ಪೂರ್ತಿ ಕೊಡೋ ಅವನ ಒಂದೇ ನೋಟ ...ದುತ್ತನೇ ಎದುರಾದ ವಿರುದ್ದ ಭಾವ ..ಮನವನ್ನ ಕುಗ್ಗಿಸೋಕಂತಾನೇ ಬಂದಿದ್ದು ಅವನು ಅನ್ನೋ ಅವಳ ಮನ ....ಈಗ ಹೃದಯದ ಬಾಗಿಲಿಗೆ ನೆನಪಾಗಿ ಬರೋ ಹುಡುಗ ಅವನನ್ನ ನೋಡಿ ಯಾಕೆ ನೀ ಮಂಕಾಗಿ ಕೂತೆ ಅನ್ನೋ ಮನ..ಖುಷಿಸಲಾಗದ ಆ ಮಳೆಗಾಲದ ಸಂಜೆ



 

ಪರಿಸ್ಥಿತಿಯ ಅನಿವಾರ್ಯ ಅಂತ ಒಂದೇ ಕಾರಣ ಹೇಳಿ ,ಅವಳ ಜವಾಬ್ದಾರಿಗಳನ್ನ ತಾಕಿಸಿಕೊಳ್ಳೋ ಒಂದು ಸಣ್ಣ ಪ್ರಯತ್ನವನ್ನೂ ಮಾಡದೇ ಕತ್ತಲ ಸಂಜೆಯಲ್ಲಿ ಕತ್ತಲಾಗೇ ಉಳಿದು ಹೋದ ಅವನ ಬಗ್ಗೆ ಅಲ್ಲೊಂದು ನೋವಿತ್ತು ...
ಕಳೆದ ನೆನಪನ್ನೆಲ್ಲಾ ಜತನ ಮಾಡ್ತಾ ಮಾಡ್ತಾ ಅವಳಿಗೆ ಅರಿವಿಲ್ಲದೇ ಅವಳ ಕಣ್ಣಂಚು ಒದ್ದೆಯಾಗಿತ್ತು ....ಕಿಟಕಿಯಲ್ಲಿ ಆ ಕತ್ತಲ ಹಾದಿಯಲ್ಯಾರೋ ಬರುತ್ತಿರೋ ತರ ಅನಿಸಿ ...ಹೌದು ...ಅವನು ಅವನೇ... ಅದೇ ಹುಡುಗ .. ಹಾದಿಯಲ್ಲಿ ಜೊತೆಯಾಗೋ ಗೆಳೆಯ ..ಒದ್ದೆಯಾದ ಕಣ್ಣಂಚಲ್ಲೂ ಅವನ ಮುದ್ದು ಮುಖ ಸ್ಪಷ್ಟವಾಗಿತ್ತವಳಿಗೆ ....ಮಂಜಾದ ನೆನಪಿನ ಹಾದಿಯಲ್ಲಿ ಅವಳ ಅವನು ಮತ್ತೆ ಹಿಂತಿರುಗಿದ್ದ ಸೂಚನೆ ನೀಡಿತ್ತು ಮನ ...

ಭಾವಗಳೇ ಇಲ್ಲದ ,ಭಾವಗಳನ್ನ ದಿಕ್ಕರಿಸಿ ಎದ್ದು ಹೋದ ಅದೇ ಅವನು ಇವತ್ಯಾಕೋ ತೀರ ಭಾವುಕನಂತೆ ,ಒಲವ ಸಹ ಪಯಣಿಗನಂತೆ ನೆನಪಾಗಿದ್ದ..ಒಲವ ಗೆಳೆಯನಾಗಿ ಕಾಡ ಹತ್ತಿದ್ದ ..ಕ್ಷಣವೊಂದಕ್ಕೆ ಪರಿಸ್ಥಿತಿಯ ಅರಿವಾಗಿ ,ತನ್ನದೇ ಜವಾಬ್ದಾರಿಗಳು ಕರೆದಂತನಿಸಿ ನೆನಪನ್ನ ಕೊಡವಿ ಕಿಟಕಿ ಮುಚ್ಚಿದ್ದಳು ...(ಮನದ ಕಿಟಕಿ ಮುಚ್ಚೋಕೆ ಮರೆತಳೇನೋ )
 ಎಲ್ಲವನ್ನ ಬದಿಗೊತ್ತಿ ಕಣ್ಣ ಮುಚ್ಚಿದರೇ   ಪ್ರೀತಿಯಿಂದ ಅವಳದೇ ಹೆಸರ ಕರೆಯುತ್ತಾ ಬಾಗಿಲ ತಟ್ಟಿದ ಸದ್ದು ....!

ಅದವಳ ಭ್ರಮೆಯಾ ?

ಕನಸಾ?

ವಾಸ್ತವವಾ?

Monday, May 27, 2013

ಭಾವಕ್ಕೆ ಜೊತೆಯಾಗೋ ಭಾವ.....

ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು …

"ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ ಹತ್ತಿರವಾದ ಭಾವ ಇದು ! ಪರಸ್ಪರ ಗೌರವಿಸೋ ಎರಡು ಸುಂದರ ಮನವಿದ್ದರೆ ಸಾಕು ಕಣೇ ಸ್ನೇಹಿತರಾಗೋಕೆ ಅನ್ನೋ ಅವನ ಮಾತಿಗೆ ನಿಜಕ್ಕೂ ತಲೆಯಾಡಿಸಿದ್ದಳು ಅವಳು.






ಅಲ್ಲೊಂದು ಮಧುರ ಸ್ನೇಹ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. ಮುಖ ನೋಡದೇ ಅವಳವನಿಗೆ ಹತ್ತಿರವಾಗಿದ್ದಳು. ಅದೆಷ್ಟೋ ಭಾವಗಳನ್ನ ಸಂಕೋಚವಿಲ್ಲದೇ ಹಂಚಿಕೊಳ್ಳೋ ಅಷ್ಟು ಸಲುಗೆ ಅವರಿಬ್ಬರ ನಡುವೆ ಇತ್ತು. ಮನದಲ್ಲಿ ನಡೆಯೋ ಕೆಲವೊಂದು ಗೊಂದಲಗಳನ್ನ ಇಬ್ಬರೂ ನೇರಾ ನೇರಾ ಹೇಳಿಕೊಂಡು ಬಗೆಹರಿಸಿಕೊಳ್ಳುತ್ತಿದ್ದರು. ಇಬ್ಬರ ಭಾವದಲ್ಲೂ ಪ್ರಾಮಾಣಿಕ ಉತ್ತರ ಸಿಗುತ್ತಿತ್ತು.


ಮುಖವನ್ನೇ ನೋಡಿರದ ಹುಡುಗನ ಮೇಲೇ ನಿಂಗ್ಯಾಕೆ ಅಷ್ಟೊಂದು ನಂಬಿಕೆ ಗೆಳತಿ ಅನ್ನೋ ಅವನ ಪ್ರಶ್ನೆಗೆ -ಉತ್ತರ ನಂಗೂ ತಿಳಿಯದು ಗೆಳೆಯಾ, ಕೆಲವೊಮ್ಮೆ ನಂಗೂ ಇಂತದ್ದೇ ಅಸಂಬದ್ಧ ಪ್ರಶ್ನೆಗಳು ಕಾಡ್ತಾ ಇರುತ್ವೆ, ನಿನ್ನೊಟ್ಟಿಗೆ ನಾ ಮಾತಾಡಿದ ಈ ಕ್ಷಣ ನಂಗೇನೋ ಖುಷಿ. ಹಂಚಿಕೊಳ್ಳೋ ಪ್ರತಿ ಭಾವಕ್ಕೂ ಹೊಸತನದ ರಂಗು. ನನ್ನೆಲ್ಲಾ ಭಾವಕ್ಕೂ ಪ್ರೀತಿಯಿಂದ ಸ್ಪಂದಿಸೊ ನಿನ್ನ ಮನದೊಂದಿಗೆ ನಾನೇ ಸೇರಿ ಹೋದ ಅನುಭವ. ನಿನ್ನ ಗೆಳತಿಯಾಗಿ, ತಂಗಿಯಾಗಿ, ಆತ್ಮೀಯ ಬಂಧುವಾಗಿ ನಿನ್ನೊಟ್ಟಿಗೆ ನನ್ನೆಲ್ಲಾ ಭಾವಗಳನ್ನ ಹೇಳಿಕೊಳ್ಳೋ ,ಹಂಚಿಕೊಳ್ಳೋ ಖುಷಿ ಮಾತ್ರ ನಂದು ಅಂತಷ್ಟೇ ಹೇಳಬಲ್ಲೆ ಅನ್ನೋದು ಅವಳ ಸಿದ್ಧ ಉತ್ತರ.
 ಇಷ್ಟೊಂದು ನಂಬಿಕೆಗೆ ನಾ ಅರ್ಹನೋ ಅಲ್ವೊ ಅನ್ನೋ ಭಯ ನಂದು ಕಣೇ ಅಂತ ಆ ಭಾವವನ್ನ ಮತ್ತೂ ಗೋಜಲಾಗೇ ಉಳಿಸೋ ಅವನ ಜಾಣತನಕ್ಕೆ ಪದ ಸಿಗದೇ ಅವಳೇ ಸುಮ್ಮನಾಗುತ್ತಿದ್ದಳು.


ಮುಂಜಾನೆಗೊಂದು ಭರವಸೆಯ ಮಾತು, ಮುಸ್ಸಂಜೆಗೊಂದು ತಂಪಾದ ಶುಭಾಶಯ ಅವನ ಪ್ರತಿ ದಿನದ ದಿನಚರಿ. .ಊಟ ಮಾಡೋದನ್ನ ಮರೆತಾನು ಆದರೀ ಶುಭಾಶಯವನ್ನ ಪ್ರತಿ ದಿನವೂ ಉದಯಿಸೋ ಸೂರ್ಯನಷ್ಟೇ ಸತ್ಯವಾಗಿ ಹೇಳುವವ ಅವ. ಪ್ರತಿದಿನದ ಅವನ ಸುಪ್ರಭಾತದ ಶುಭಾಶಯ ಅವಳಿಗೆ ಹೊಸತನ ತರುತ್ತಿತ್ತು .ಏಳೋಕೆ ಸೋಮಾರಿಯಾದ ಗೆಳತಿಯನ್ನ ಅದೆಷ್ಟೋ ದೂರದಿಂದ ಏಳಿಸೋ ಆತ್ಮೀಯತೆಯ ಸಲುಗೆ ಅವನದು…


ಅವಳ ಪ್ರಶ್ನೆಗೆ ಅವನದೊಂದು ಮರು ಪ್ರಶ್ನೆ! ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾ ಅನ್ನೊದೇ ಅವಳು ತಿಳಿಯದೇ ಕೇಳೋ ಪ್ರಶ್ನೆ :)


ಈ ಆತ್ಮೀಯತೆಯ ಭಾವಕ್ಕೆ ಉತ್ತರ ಹುಡುಕ ಹೊರಟರೆ ತಲುಪೋದು ಗೊಂದಲದ ತುದಿಯನ್ನ ಅನ್ನೋದು ತಿಳಿದ ಮೇಲೆ, ಕೆಲವೊಂದಿಷ್ಟು ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಸಿಯೇ ಉಳಿಸೋದು ಸೂಕ್ತ ಅನ್ನೋ ಭಾವ ಇಬ್ಬರದೂ ಕೂಡಾ…
ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು ಅಂತ ಕಣ್ಣು ಮಿಟುಕಿಸೋ ಅವನು.
 ವಿಷಯವೊಂದು ಸಿಕ್ಕಾಗ ಗಂಟೆಗಟ್ಟಲೇ ವಿಮರ್ಶಿಸೋ ಆ ಎರಡು ಮನವನ್ನ ನೋಡಿದಾಗ ನಿಜಕ್ಕೂ ಒಂದು ಖುಷಿಯ ಅನುಭವ ಆಗೋದು ಸತ್ಯ. ಚಿಕ್ಕ ಚಿಕ್ಕ ಖುಷಿಗಳನ್ನೂ ಪ್ರೀತಿಯಿಂದ ಅನುಭವಿಸೋ ಮನಗಳು ಅವು.

ಅಷ್ಟೊಂದಾಗಿ ಪ್ರಪಂಚ ನೋಡಿರದ ಅವಳಿಗೆ ಅವನ ಜೀವನ ಅನುಭವವೇ ದಿನ ದಿನಕ್ಕೂ ಹೊಸ ಪ್ರಪಂಚ ನೋಡುತ್ತಿರೋ ತರ ಭಾಸ ಮಾಡಿದ ತರಲೆಗಳೆಷ್ಟೋ, ಭಾವುಕರಾಗಿ ಮಾತಾಡಿದ ದಿನಗಳೆಷ್ಟೋ, ಕಾಲೆಳೆದು /ಎಳೆಸಿಕೊಂಡು ತೋರಿರೋ ಹುಸಿ ಮುನಿಸುಗಳೆಷ್ಟೋ…


ಹೇಳಲಾಗದ ಅವೆಷ್ಟೋ ಇಲ್ಲ ಗಳ ನಡುವೆ ಇರೋ ಒಂದೇ ಒಂದು ಭಾವ ಮಾತ್ರ…ಅವನವಳ ಸ್ನೇಹಿತ.

ಬದುಕು ಕರುಣಿಸಿದ ಅಪರೂಪದ ಗೆಳೆತನದ ಖುಷಿ ಅದು.

 ಆಶ್ಚರ್ಯ ಆಗೋದು ಇಲ್ಲೆ
ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಅವಳು ಅದ್ಯಾವತ್ತೋ ಅವನ ಸ್ವಚ್ಚ ನಗುವಿಗೆ ಸೋತಿದ್ದಳು… ಸ್ನೇಹಕ್ಕೆ ಜೊತೆಯಾಗಿ, ಜವಾಬ್ದಾರಿಗಳಿಗೆ ಬೆನ್ನು ಮಾಡದೆ, ನಿನ್ನೆಲ್ಲಾ ನೋವುಗಳು ನನ್ನವೂ ಕೂಡಾ ಅನ್ನುತ್ತಾ ನೋವಿಗೆ ನಾ ಜೊತೆ ಇರುವೆ ಅನ್ನೋ ಸೂಕ್ಷ್ಮಗಳ ತಿಳಿ ಹೇಳುತ್ತಾ, ಆತ್ಮೀಯತೆಗೆ ಎರಡರಷ್ಟು ಆತ್ಮೀಯತೆ ತೋರುತ್ತಾ, ಭಾವಗಳನ್ನ ಬಿಡಿ ಬಿಡಿಯಾಗಿ ತಿಳಿಸೋ ಅವನನ್ನ ತುಂಬಾನೇ ಹಚ್ಚಿಕೊಟ್ಟ ಭಾವ ಅವಳದು.

ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ….

"ಭಾವ ನೀನಾದರೆ ….ಭಾವನೆ ನಾನು "ಅನ್ನೋ ಸಲುಗೆಯ ಆ ಸ್ನೇಹ ಚಿರಾಯುವಾಗಲಿ ಅನ್ನೋ ಆಶಯವನ್ನು ಹೊತ್ತು …

ಆತ್ಮೀಯತೆಯ ಸೋಂಕೂ ಇಲ್ಲದೇ ಬರಿಯ ಹಣ, ಒಣ ಪ್ರತಿಷ್ಟೆಗಳ ಹಿಂದೆ ಬಿದ್ದಿರೋ ಸಮಾಜಕ್ಕೊಂದು ಧಿಕ್ಕಾರವೀಯುತ್ತಾ…

ರಕ್ತ ಸಂಬಂಧವಿಲ್ಲದೇ, ಸ್ನೇಹಿತರಲ್ಲದೇ, ಪರಸ್ಪರ ಪರಿಚಿತರಲ್ಲದೇ, ಅದೆಲ್ಲೋ ಒಂದು ಸಣ್ಣ ಸ್ನೇಹವಾಗಿ, ಸ್ನೇಹ ಸಂಬಂಧವಾಗಿ ,ರಕ್ತ ಸಂಬಂಧಕ್ಕೂ ಮೀರಿದ ಆತ್ಮೀಯತೆ ಮೂಡಿ, ಭಾವಕ್ಕೆ ಭಾವ ಧಾರೆಯೆರೆಯೋ, ಪ್ರೀತಿಗೆ ಸಹಸ್ರ ಪ್ರೀತಿ ನೀಡೋ ಇಂತಹ ಅದೆಷ್ಟೋ ಪಕ್ವ ಸ್ನೇಹಗಳ ಮಾತಾಗಿ,
 ಇಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…
ಎಲ್ಲರದೂ ಆಗಲಿ.\


 [ಪಂಜುವಿನಲ್ಲಿ ಪ್ರಕಟಗೊಂಡ ನನ್ನ  ಭಾವವಿದೆ :)
ಧನ್ಯವಾದ ಪಂಜು ಬಳಗಕ್ಕೆ ....
ಪಂಜು ಲಿಂಕಿಗಾಗಿ ...
http://www.panjumagazine.com/?p=2469 ]

Saturday, May 25, 2013

ಕಲಾಗ್ರಾಮದಲ್ಲಾದ ಅದ್ಭುತ ಭಾವದ ಸುತ್ತಾ....

 
ಬೆಂಗಳೂರಿಗೆ ಬಂದು ಎರಡು ದಿನವಾಗಿತ್ತು ..ಆತ್ಮೀಯರ ಜೊತೆಗಿನ ಮಾತು ಹರಟೆಗಳಲ್ಲಿ ಆ ಎರಡು ರಾತ್ರಿಗಳೇ ಕಾಣೆಯಾಗಿತ್ತು !!

ಮೊದಲೇ ಇಂಟರ್ನಲ್ ಕಾರುಬಾರಲ್ಲಿ ನಿದ್ದೆ ಅನ್ನೋ ನನ್ನ ಅತೀ ಪ್ರೀತಿಯ ಗೆಳೆಯ ಕಳೆದು ಹೋಗಿದ್ದ ....ಆದರೂ ನಂಗವತ್ತು ಏನನ್ನೋ ನೋಡಲೇ ಬೇಕೆಂಬ ಭಾವ ...ಆದರೂ ಮನದಲ್ಲೊಂದು ಸಣ್ಣ ಅಳುಕಿತ್ತು ...೯ ತಾಸುಗಳ ಕಾಲ ಬರಿಯ ಬಯಲು ರಂಗಮಂದಿರದಲ್ಲಿ ಕೂತು ನಂಗಿದನ್ನು ನೋಡೋಕೆ ಸಾಧ್ಯಾನಾ ? ಕಾಡಿ ಬೇಡಿ ಹೊರಡಿಸಿದ್ದ ಗೆಳತಿ ಏನಂದಾಳು ?....ನಂಗೆ ನಾ ಪ್ರಶ್ನಿಸಿದ್ದೆ ...ಆದರೆ ನೋಡಿದ್ದ ಮದುಮಗಳ ಭಾವಚಿತ್ರಗಳು ಸಮಾಧಾನಿಸಿದ್ದವು ನನ್ನ :) ...ಕೊನೆಗೂ ನಿರ್ಧರಿಸಿ ಪಯಣ ಸಾಗಿತ್ತು ಆ ಕಡೆಗೆ ....

ಸಮಯ ಸಂಜೆ ೭:೩೦ .ನಾವವತ್ತು ಬೆಂಗಳೂರು ಹೊರವಲಯದ ಮಲ್ಲತ್ತಹಳ್ಳಿಯ "ಕಲಾಗ್ರಾಮ"ದಲ್ಲಿದ್ದೆವು

ಕಲಾಗ್ರಾಮ-ಹೆಸರೇ ಸೂಚಿಸುತ್ತೆ ಇದೊಂದು ಕಲೆಯ ಗ್ರಾಮ ..ಕಲಾರಸಿಕರ ಊರೆಂದು ...

"ಮಲೆಗಳಲ್ಲಿ ಮದುಮಗಳು" ಅನ್ನೋ ಕನ್ನಡಿಗರ ಹೆಮ್ಮೆಯ ಕಾದಂಬರಿಯೊಂದನ್ನು ಕೂತು ನೋಡೋ ಭಾಗ್ಯ ದಕ್ಕಿತ್ತು ಆ ರಾತ್ರಿ ...


                                                 ನಾಟಕದ ಸಾರ ಹೊತ್ತು
 

ರಂಗವನ್ನೊಮ್ಮೆ ನೋಡಿ ನಾ ಆವಾಕ್ಕಾದದ್ದು ಸುಳ್ಳಲ್ಲ !!! ..ಸುಂದರ ರಂಗಸ್ಥಳ ಕೆರೆ ಅಂಗಳ .ಅದೆಷ್ಟು ಸ್ವಾಭಾವಿಕವಾಗಿತ್ತೆಂದರೆ ನಾ ಎಲ್ಲೊ ಕನಸಲ್ಲಿ ಅದೇ ಊರಿಗೆ ಹೋದಂತನಿಸಿತ್ತು ...ಜೊಗಿಯರು ಹೇಳೋ ಕಥೆಯ ಚಿತ್ರಣವದು ....

          





                                                           ರಂಗ ಪ್ರವೇಶ


.ಮೊದಲ ಪಾತ್ರದಾರಿ ಗುತ್ತಿ ಮತ್ತವನ ನಾಯಿ ಹುಲಿಯ ...ನಾಟಕದಲ್ಲಿ ಮೊದಲಿಂದ ಕೊನೆಯ ತನಕ ಹುಲಿಯ ಹುಲಿಯನಾಗೇ ಮೆರೆದದ್ದು ಮಾತ್ರ ನನಗತೀ ಹತ್ತಿರವಾದದ್ದು

ದುರ್ಗಮ ದಾರಿಯ ವರ್ಣನೆಯಲ್ಲಿ ಬರೋ ಉಂಬಳ ಜೀರುಂಡೆಯನ್ನೂ ಬಿಡದೇ ತೋರಿಸಿರೋ ಪರದೆಯ ಹಿಂದಿನ ಪರದೆಗೆ ನನ್ನದನಂತ ನಮನ .

ಕಿನ್ನರ ಕಿರುಗೆಜ್ಜೆಯ ಸುತ್ತ ಮೂಡಿರೋ ಹೆಜ್ಜೆ ಗುರುತಲ್ಲಿ ನಾಗಕ್ಕ ನಾಗತ್ತೆಯರ ಜೊತೆಗಿನದೊಂದು ಭಾವ ಐತ ಮತ್ತವನ ಮಡದಿ ಪಿಂಚಲುವಿನ ಮಧುರ ಪ್ರೀತಿಯ ಭಾವಕ್ಕೂ ಸೆರೆಯಾಯಿತು!...ನೋಡುತ್ತಿದ್ದರೆ ನಾವೆಲ್ಲಿ ಕುಳಿತಿದ್ದೆವು ಅನ್ನೋದೇ ಮರೆತು ಹೋಗೊ ಭಾವವದು ...


                              ತಲೆಮಾರಿನ ಕಸುಬು ಕೊನೆಯಾಗೋ ಸಮಯದಲ್ಲೊಂದು ಕ್ಲಿಕ್ 
                      




                                                  ಎರಡನೇ ರಂಗದ ಆರಂಭ


ಎರಡನೇ ರಂಗಸ್ಥಳದಲ್ಲಿ ತಿಮ್ಮಿಯ ಪಾತ್ರ .....ತಿಮ್ಮಿ ಕಾಣೆಯಾದುದ್ದಕ್ಕೆ ಬರೋ ದೇವಿಯ ಪಾತ್ರ ಮನ ಮುಟ್ಟಿತ್ತು..ಪ್ರಸ್ತುತ ಜಗತ್ತಿಗನ್ವಯಿಸಿ ಈಗಿರೋ ಮಠ ಮಾನ್ಯರ ಬಗೆಗಿನ ಅಣುಕು ನೋಟದಲ್ಲೊಂದು ಸಾರವಿತ್ತು ....ಸುಬ್ಬಣ್ಣನ ಮಗ ದೊಡ್ಡಣ್ಣ ...ಅವನ ಮಗನಂತೂ ನಾಟಕದ ಕೇಂದ್ರ ....ಆ ಚಿಕ್ಕ ಪೋರನ ಅಭಿನಯವೂ ಮನಮುಟ್ಟಿತ್ತೆಂದರೆ ಪರದೆಯ ಹಿಂದಿನ ತಾಲೀಮಿನ ತಲ್ಲೀನತೆ ಸ್ಪಷ್ಟವಾಗಿತ್ತು ... ಬರುವೆ ಎಂದಿದ್ದ ನಲ್ಲ ಬರದೇ ಹೋದನಲ್ಲ ಅನ್ನೋ ಅವಳ ಸಂಕಟಕ್ಕೆ ಬೆಳಕಿಲ್ಲದ ಹಾದಿಯಲ್ಲಿ ಬೆಳಕ ಹುಡುಕುತ್ತಾ ಹೋಗೋದು ನೋವಿಲ್ಲದ ಬೀದಿಯನ್ನ ಹುಡುಕಿದಂತೆಯೇ ಅಂತ ಸಮಾಧಾನವಿಟ್ಟ ಮನವೊಂದಿತ್ತು!!


                                                                  ಬರುವೆ ಎಂದ ನಲ್ಲಾ
                                                                  ಬರದೇ ಹೋದನಲ್ಲ

                                           ಬೆಳಕಿಲ್ಲದ ಹಾದಿಯಲ್ಲಿ                 
       ನೋವಿಲ್ಲದ ಬೀದಿಯಲ್ಲಿ ...                                               
ಬೆಳಕನ್ನರಸುತ್ತಾ    ...                                            
 


ಸುಬ್ಬಣ್ಣ ಹೆಗ್ಗಡೆ - ಪಾತ್ರ ಮೂರನೇ ರಂಗಸ್ಥಳದ್ದು ...ಜಾತೀಯತೆಯೇ ಬೇರಾದ ಹಳೆಮನೆ ಊರಲ್ಲಿ ಮಗನ ಕಳಕೊಂಡ ನೋವಲ್ಲಿ ಕುಗ್ಗಿ ಹೋಗಿದ್ದ ಗತ್ತಿನ ಸುಬ್ಬಣ್ಣ ..ಬೆಟ್ಟದಂತೆ ಮೆರೆದಿದ್ದ ಇವರು "ಬೆಟ್ಟಕ್ಕೂ ಆಯಾಸವಾಗುತ್ತೆ ಮಾರಾಯ " ಅನ್ನುತ್ತಾ ಅಸಹಾಯಕತೆಯ ,ವ್ಯಾಕುಲತೆಯ ಮನೋಭಾವದ ಗುಟ್ಟೊಂದನ್ನ ನೋಡುಗ ಪ್ರಜೆಗೂ ಸಲೀಸಾಗಿ ವರ್ಗಾಯಿಸಿದ್ದರು ...ಇಲ್ಲಿ ಮಾತ್ರ ಕಣ್ಣಂಚು ಮಾತಾಡಿತ್ತು (ಬಹುಶಃ ಎಲ್ಲರ ಕಣ್ಣೂ ಒದ್ದೆಯಾಗಿತ್ತೇನೋ )

                                          ಬೆಟ್ಟಕ್ಕೂ ಸುಸ್ತಾಗುತ್ತೆ ಮಾರಾಯ ಅನ್ನೋ ವ್ಯಾಕುಲತೆ


                                             ಅಂತಕ್ಕನ ಹೋಟ್ಲಲ್ಲಿ -ಸುಬ್ಬಣ್ಣ ಹೆಗ್ಗಡೆ



ಇಲ್ಲಿಯೆ ಅಂತಕ್ಕನ ಹೋಟೆಲ್ ..ಇಲ್ಲಿಯೇ ಸುಬ್ಬಣ್ಣ ಹೆಗ್ಗಡೆ ದೇವಯ್ಯನ ಮಗನಲ್ಲಿ ತನ್ನ ಮಗನನ್ನ ಹುಡುಕೋದು ....ಇಲ್ಲಿಯೆ ಅಂತಕ್ಕನ ಮಗಳು ಕಾವೇರಿಯ ಬದುಕ ಅಂತ್ಯ ...ಹಾಗೆಯೆ ಇಲ್ಲಿಯೆ ದೊಡ್ಡಯ್ಯನ ಹೆಂಡತಿಯ ಬಾಳೂ ಅಂತ್ಯ !!!

ಇದೊಂದು ಶೋಕದ ಮನೆಯೆಂದರೆ ಸರಿಯಾದೀತೇನೋ ! ....

ಕೊನೆಯ ರಂಗಸ್ಥಳ- ಹೊಂಗೆಯ ಮನೆ ....

ಇಲ್ಲಿಯೇ ಎಲ್ಲಾ ಪಾತ್ರಗಳೂ ಒಂದಾಗೋದು ... "ಇಲ್ಲಿ ಯಾರೂ ಮುಖ್ಯರಲ್ಲ ..ಯಾರೂ ಅಮುಖ್ಯರಲ್ಲ ..ಯಾವುದೂ ಯಃಕಶ್ಚಿತವಲ್ಲ " ಅನ್ನೋ ಮದುಮಗಳ ಆಶಯದ ಕೇಂದ್ರಿಕೃತವಾಗಿರೋದು :)

ಜಾತೀಯತೆಯ ಸೋಂಕು ....ಎಲ್ಲವನ್ನೂ ಮೆಟ್ಟಿ ನಿಂತ ಮಾನವತೆಯ ಲಿಂಕು!

ಬೆಟ್ಟದ ತುದಿಯಲ್ಲಿನ ಗುತ್ತಿ -ತಿಮ್ಮಿಯ ಭಾವಗಳು ..ಬೆಟ್ಟದ ಕೆಳಗಿನ ಹುಲಿಯನ ಭಾವ ...ಕೊನೆಗೂ ಯಜಮಾನನಿಗಾಗಿ ಕೊನೆಯಾಗೋ ಹುಲಿಯ ಹುಲಿಯನಾಗೇ ಮೆರೆದು ಧೀಮಂತನಾಗೇ ಮಣ್ಣಾಗಿ ಹೋದ.. ಅದಕ್ಕೆ ರೋದಿಸೋ ಗುತ್ತಿ ..ಪ್ರವಾಹ,ಮಳೆ .


                                                    ಪರದೆಗಿಲ್ಲಿ ತೆರೆ ಬಿತ್ತು




ಹೌದು......ನಾ ನೋಡಿದ ಮೊದಲ ನಾಟಕವಿದು ....ಮನ ತಟ್ಟಿತ್ತು ...ಮನಸ್ಸು ಮುಟ್ಟಿತ್ತು ...ಮತ್ತೊಮ್ಮೆ ನೋಡಬೇಕೆಂದು ಕಾಡಿತ್ತು ...

ನೀವು ಬರಿಯ ಕಲಾವಿದರಲ್ಲ ....ಕಲೆಯಲ್ಲಿ ದೈವತ್ವವನ್ನ ಕಾಣೋ ,ಕಲೆಯನ್ನ ಉಸಿರಾಗಿಸಿಕೊಂಡು ,ಕಲೆಯನ್ನ ಹಂಚುತ್ತಿರೋ ಕಲಾ ಪೋಷಕರೂ ಕೂಡಾ ....

ಪರದೆಯ ಹಿಂದಿನ ನಿಮ್ಮೀ ಪರಿಧಿಯ ಶ್ರಮಕ್ಕೆ ನನ್ನದೊಂದು ನಮನ ....

ಕಲಾಕ್ಷೇತ್ರದಲ್ಲೊಂದು ಕಲಾರಾಧನೆ ಮಾಡಿದ ಸಾರ್ಥಕ್ಯ ಭಾವವಿವತ್ತು.



ಅವತ್ತಿನ ಆ ಖುಷಿಗೆ ಪಾಲುದಾರರಾಗಿ -ಸುಬ್ರಹ್ಮಣ್ಯ ಹೆಗಡೆ (ಭಾವಸ್ರಾವದ ಗೆಳೆಯ ),ಶ್ರೀವತ್ಸ ಕಂಚಿಮನೆ (ಭಾವಗೊಂಚಲಿನ ಆತ್ಮೀಯ) ,ಮೈತ್ರಿ ಹೆಗಡೆ (ಆತ್ಮೀಯ ಗೆಳತಿ)

Thursday, May 23, 2013

ಬಾನ ಮಾಳಿಗೆಯಲ್ಲಿ ಬಾಳ ಚಂದಿರ ಜೊತೆಯಾಗಿ.



ಒಂಟಿತನದ, ಕತ್ತಲೆಯ ಭಾವದ ಜೊತೆಗಾರನಾದ ಅವನ ಮೇಲೆ ಅವಳಿಗ್ಯಾಕೋ ಒಲವ ಮೋಹ....ಅವನವಳ ಗೆಳೆಯ ,ಇನಿಯ ,ಪ್ರೀತಿ ,ಸಿಟ್ಟು.ಬೇಸರ.

ಎಲ್ಲಾ ಭಾವಗಳ ಏಕೈಕ ಸಂಗಾತಿ ಎಂದರೆ ಸರಿಯಾದೀತೇನೋ ...

ಅವಳ ಅದೆಷ್ಟೋ ನೀರವ ರಾತ್ರಿಗಳಿಗೆ ಕಿವಿಯಾದವನವನು  .ಅದೆಷ್ಟೋ ಬೇಸರಗಳ ಒಡೆಯ ,ಹಲ ಅತಿಶಯದ ಕನಸುಗಳ ಗೆಳೆಯ ....

ಪ್ರೀತಿ ಕಂಗಳ ಸರದಾರನೀ ಕನಸುಗಾರ :)

ಅವಳ ಕೆಲ ಗುಟ್ಟುಗಳೂ ಅವನ ಜೋಪಡಿಯಲ್ಲಿ ಜೋಪಾನವಾಗಿವೆಯೇನೋ ...!






ಭಾವಕ್ಕೆ ಜೊತೆಯಾಗಿ -

ದೂರಾದ ನೋವ ಭಾವವನ್ನ ಸಂಜೆಯ ಕತ್ತಲಲ್ಲಿ ಮಹಡಿಯಲ್ಲಿ ಕೂತು ಮಾತಾಡೋದು ಅವಳಿಗ್ಯಾಕೋ ಇಷ್ಟ ..ಒಂದರ್ಧ ಗಂಟೆ ಮನದೊಂದಿಗೆ ಮಾತಾಡೋಕೆ ಬೆಳಿಗ್ಗೆ ಇಂದ ಸಂಜೆ ಆಗೋದನ್ನೆ ಕಾಯೋಳು ಅವಳು ...ಕತ್ತಲ ರಾತ್ರಿಗಳಲ್ಲೂ ಮೋಡಗಳ ಮರೆಯಲ್ಲಿ ಅವನನ್ನ ಹುಡುಕುತ್ತಾ ಕೂರೋ ಹುಚ್ಚು ಮನ ಅವಳದ್ದು ..ಅವತ್ತು ಅವನಿಲ್ಲ ಅಂತ ಗೊತ್ತಿದ್ದರೂ ಮತ್ತವನನ್ನೇ ಹುಡುಕೋ ಧಾವಂತದ ಹುಡುಗಿ ಅವಳು ...

 

ಇಂಥದ್ದೇ ಅದೆಷ್ಟೋ ಸಾವಿರ ಭಾವಗಳ ಹಕ್ಕುದಾರ ಅವನು ..ನಗು ಮೊಗದಿ ಎಲ್ಲರನೂ ಮೋಡಿ ಮಾಡೋ ಚೆನ್ನಿಗ..."ನನ್ನ ಹುಡುಗ ನಿನ್ನಂತೇ ಇರಬೇಕು ಕಣೋ " ಅನ್ನೋ ಅದೆಷ್ಟೋ ಹುಡುಗಿಯರ ಮನಸ ಹುಡುಗ ಅವಳ ಈ ಕನಸ ಸುಂದರ :)

ಪುಟ್ಟುವಿಗೆ ಮಾಮ ...ಅವನಮ್ಮನಿಗೆ ಮಗನನ್ನ ಊಟ ಮಾಡಿಸೋಕೇ ಅಂತಾನೇ ಬಂದ ಗೆಳೆಯ .....

ಹುಡುಗರಿಗೆ ಪ್ರೇಮ ಕವಿ ..ಗೆಳತಿಯರಿಗೆ ಮೊದಲ ಗೆಳೆಯ...ಅಜ್ಜ ಅಜ್ಜಿಗೆ ವಾಕಿಂಗ್ ಫ್ರೆಂಡ್  ....ಅದೆಷ್ಟೋ ಬೇಸರಿಸೋ ಮುಸ್ಸಂಜೆಗಳ ನೆಚ್ಚಿನ ಮಿತ್ರ ....
ಬೆಳದಿಂಗಳ ಸಜ್ಜನಿಕ .ಜ಼ಗದೆಲ್ಲ ಮಧುರ ಭಾವಗಳ ಒಡೆಯ ಈ ಕ್ಷಣ ಮನವನ್ನಾಳಿದ ಸೊಬಗು :)


ಕಾರ್ಮೋಡದೊಳಗೂ ನುಸುಳೋ ಪರಿಣಿತ .

ನೋವನ ಮುದುಡಿಸೋ ನಲಿವಿನ ಧೀಮಂತ .

ಅವನೇ ಇವನು ...

ಯಾರಿವನು ?

ಮುನಿಸಿಕೊಂಡ ನಕ್ಷತ್ರ ಬಾನ ಮಾಳಿಗೆಯಲ್ಲಿ ಕುಳಿತುಕೊಂಡರೆ ಅದನ್ನೂ ಸ್ಪರ್ಶಿಸಿ ಕಾಂತಿ ಕೊಡೋ ಅದೇ ಬಾನ ಚಂದಿರನಿವನು ....


                      

                                               ಫೋಟೋ ಕ್ರೆಡಿಟ್ಸ್ :ಬಾಲಣ್ಣ  (ನಿಮ್ಮೊಳಗೊಬ್ಬ ಬಾಲು)




ಅವಳ ಮನಕ್ಕೆ ಅವನು -

ಕಣ್ಣ ಕನಸ ಹೊರಹಾಕದವಳಿಗೆ

ಕಣ್ಣಿನಲೇ ಮಾತು ಕಲಿಸೋನು.

ಭಾವ ಹಂಚಿಕೊಳ ಬರದವಳಿಗೆ

ಭಾವಗಳ ಬದುಕ ತಿಳಿಸೋನು .

ಯಾರಿವನು ?

ನೀನಾ?

ಅವನಾ?



                                   

                                             

                                             ಫೋಟೋ ಕ್ರೆಡಿಟ್ಸ್ :ಬಾಲಣ್ಣ(ನಿಮ್ಮೊಳಗೊಬ್ಬ ಬಾಲು)




ಬದುಕ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟದಲ್ಲಿರೋ ಅವಳಿಗೆ ..
ಕನಸುಗಳಿಗೆ ಜೊತೆಯಾಗೋ ನೀರವ ರಾತ್ರಿಗಳ ಸಮಾಧಾನೀ ಗೆಳೆಯನಾದ ಬಾನ ಚಂದಿರನೇ ಬಾಳ ಚಂದಿರನಾದಂತೆ ಭಾಸವಾಗಿ...
ಅವಳದೇ ಕನಸುಗಳ ಸುತ್ತಾ ನನ್ನದೊಂದು ಸುತ್ತು  :)


(ಬಾಲಣ್ಣ ,ಸುಂದರ ಚಂದಿರನನ್ನು ನಿಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಕ್ಕೆ ಮೊದಲ ಧನ್ಯವಾದ ನಿಮಗೆ .ನಿಮ್ಮ ಸುಂದರ ಚಂದಿರ ಎಂತಹವರನ್ನೂ ಮೋಡಿ ಮಾಡೋ ತರ ಇದೆ :)

ಬಲು ಸುಂದರ ನಿಮ್ಮೂರಿನ ಚಂದಿರನನ್ನು ತಂದು ಕೈಯಲ್ಲಿರಿಸಿದ್ದೀರಿ .ಎಲ್ಲರಿಗೂ ಇಷ್ಟವಾಗೋ ಚಂದಿರ ನಿಮ್ಮಿಂದ ಇನ್ನೂ ಸುಂದರವಾಗಿ ಕಂಡ ಇವತ್ತು ...ಥಾಂಕ್ಸ್ ಜಿ )

Thursday, May 16, 2013

ಮನೋ ವ್ಯಾಪಾರಿ ನಾ ....


ಬಾಳ ಸಂತೆಯಲ್ಲಿ ಜೀವದಾಳದ ಭಾವಗಳು ಹರಾಜಿಗಿವೆ !

ಕೊಂಡುಕೊಳ್ಳೋರಿಲ್ಲದೇ ,ಹಾಗೇ ಬಿಟ್ಟು ಎದ್ದು ಹೋಗಲೂ ಆಗದೇ ,ಕೈ ಬಿಡೋ ಅಸಹಾಯಕತೆಗಾಗಿ ನನ್ನದೇ ಮನವನ್ನ ನಲುಗಿಸುತ್ತಾ ........

ನನ್ನವರ ಮನಸ್ಸುಗಳನ್ನೂ ನಲುಗಿಸ ಬರುತ್ತಿರೋ ಭಾವ ಗಳ ಹರಾಜಿದು .....


                             



ತುಂಬಾ ಕಡಿಮೆ ಬೆಲೆಯ ವಸ್ತು ...ಬೆಲೆ ತೆರದೇ ಪಡೆಯಬಹುದಾದದ್ದು ....ಒಂಚೂರು ಸಮಯ ,ಒಂದಿಷ್ಟು ಒಲುಮೆ ,ಸ್ವಲ್ಪ ಆತ್ಮೀಯತೆಗೆ ದಕ್ಕೋ ವಸ್ತು ...

ಆದರೆ ಪಡೆದಾದ ಮೇಲೆ ಮಾತ್ರ ತಕ್ಕ ಬೆಲೆ ತೆರಲೇ ಬೇಕು .ಜೋಪಾನ ಮಾಡೋ ಕೆಲಸ !

ನೋವಿಗೆ ಕಣ್ಣ ಹನಿ ಜೊತೆಯಾದೀತು ಅಥವಾ ಕೈ ಹಸ್ತ ಜೊತೆಯಾದೀತು....ನಲಿವಿಗೆ ಕಿರು ನಗು ಜೊತೆಯಾದೀತು ಅಥವಾ ಅರ್ಥವಾಗದ ದೊಡ್ಡದೊಂದು ನಗುವೇ ಜೊತೆ ಸೇರೀತು ...
ಜೊತೆಯಾಗೋದಂತೂ ನಿಜ !!

ಭಾವವೊಂದೆ...
ಜೊತೆಯಾಗಿ ನಾವೂ ಇದ್ದೀವಿ ..ನಮ್ಮದೂ ಕೂಡಾ ನಿನ್ನದೇ ಹಾದಿ ...ಒಟ್ಟಿಗೇ ನಡೆಯೋಣ ಬಾ ಅಂತ ಕರೆಯೋ ಭಾವ .!

ಇದು ಪ್ರೀತಿಸೋ ಮನಗಳೊಟ್ಟಿಗೆ ,ಆಧರಿಸೋ ಮನಸ್ಸುಗಳೊಟ್ಟಿಗಿನ ನಡುವಣದ ಒಪ್ಪಂದ......
ಸಾಕ್ಷ ಸಹಿ ಹಾಕದೇ ನಡೆಯೋ ಮನಸ ಒಡಂಬಡಿಕೆ ....

ಹೇಳಿಕೊಂಡ ಪ್ರೀತಿಯ ಭಾವ ....ಹಂಚಿಕೊಂಡ ನೋವ ಅನುಭವ...ನೀಡೋ ಸಾಂತ್ವಾನ ...ಕಣ್ಣೀರೊರೆಸೋ ಆತ್ಮೀಯ ಕೈ ...

ನಾವೂ ಇದ್ದೀವಿ ಜೊತೆ ಅನ್ನೋ ಭಾವದ ಭರವಸೆ !

ಕೈ ಚಾಚೋ ಆಮಂತ್ರಣದ ಸಂಕೋಲೆ ....ಆಮಂತ್ರಣವಿಲ್ಲದ ಮನೆ (ಮನ)ಯಲ್ಲಿ ಅತೀ ಆಮಂತ್ರಿತನಂತೆ ,ಇಷ್ಟದ ಬಂಧುವಂತೆ ಸತ್ಕರಿಸೋ ಆ ಪರಿ .....

ಭಾವದಾಚೆಗೂ ಹೊರಳೋ ಬದುಕ ಪ್ರೀತಿ .

ಕಣ್ಣ ಭಾಷೆಯನ್ನೂ ಬಿಡದೇ ಅರ್ಥಮಾಡಿಕೊಳ್ಳೋ ಜಾಣತನ .....

ನಿಮ್ಮಗಳ ಮನದಲ್ಲಿನ ಲಾಲಿಪಾಪ್ ಪುಟ್ಟಿ ಅನ್ನೋ ಪ್ರೀತಿಯ ಪುಟ್ಟ ಭಾವ :)

ಗುರುತಿಸೋ ಸಣ್ಣ ನೋವ ಭಾವ ..ಎದುರು ಏನಾಯ್ತೇ ಗೆಳತಿ ಅಂತ ಕೇಳದಿದ್ದರೂ ಆಮೇಲೊಮ್ಮೆ ಯಾಕೋ ಪುಟ್ಟಾ ಬೆಳಿಗ್ಗೆ ಸಪ್ಪೆಯಾಗಿದ್ದೆ ಅಂತ ವಿಚಾರಿಸೋ ನಿನ್ನೇ ಮೊನ್ನೆ ಮಾತಾಡಿದ್ದ ಅದೇ ಗೆಳೆಯ ....!!

 

ಆತ್ಮೀಯತೆಯಂದ್ರೆ ಇದಾ ?.....ಉತ್ತರ ಹುಡುಕೋಕೆ ಹೊರಟಿಲ್ಲ ನಾ ....ಮಾರಾಟಕ್ಕಿಟ್ಟಿರೋದರ ಬಗ್ಗೆ ಜಾಸ್ತಿ ವ್ಯಾಮೋಹ ಒಳ್ಳೆಯದಲ್ಲ !!

ನನ್ನವರಾಗಿ ಆಧರಿಸೋ ,ಖುಷಿಸೋ ,ದುಃಖಿಸೋ ,ಸ್ನೇಹಿಸೋ ನಿಮ್ಮ ಅಪ್ಪಟ ಪ್ರೀತಿಯ ಭಾವಕ್ಕೊಂದು ನಮನ ....

ಈ ಪ್ರೀತಿ ಸಮ್ಮೋಹವಲ್ಲ ...ವ್ಯಾಮೋಹವೂ ಅಲ್ಲ ...ಮುಖ ನೋಡದೇ ಮೂಡಿದ್ದ ಮನಸ್ಸಿನ ಬಂಧ ...ಹತ್ತಿರದ ಬಂಧುವಾಗಿ ಜೊತೆಯಾಗಿ ಕೊನೆಯತನಕ ಕರೆದೊಯ್ಯೋ ಹೇಳಲಾಗದ ಅನುಭವಕ್ಕೆ ಬಂದಿರೋ ಶಬ್ಧ ಸಿಗದ ಶಬ್ಧ ...
ನೀವೇ ನಾಮಕರಿಸಬಿಡಿ ...

ಕೊನೆಯ ತನಕ ಜತನ ಮಾಡಿಯೇನು ನಾನದನ್ನ !

ಭಾವಗಳನ್ನ ಹರಾಜಿಗಿಡದೇ ಜೋಪಾನ ಮಾಡಿದ್ದರೂ ಅದೆಲ್ಲೋ ಧುತ್ತನೆ ಹಾರಿ ನಿಮ್ಮಲ್ಲಿ ,ನಿಮ್ಮ ತೆಕ್ಕೆಯಲ್ಲಿ ಜೋಪಾನವಾಗಿದೆ !

ಕ್ಷಣವೊಂದಕ್ಕೆ ಮನೋ ವ್ಯಾಪಾರಿ ನಾನು ಎಂತೆನಿಸಿ ...ಮತ್ತೊಂದು ಕ್ಷಣಕ್ಕೆ ಬೇರೆ ಯಾರೊಂದಿಗೋ ವ್ಯವಹರಿಸಿದ್ದಲ್ಲ ,ನನ್ನವರಿಗೇ ವ್ಯಾಪಾರ ಮಾಡಿದ್ದೆಂದು ಸಮಾಧಾನಿಸಿ ...

ಮತ್ತದೇ ಬದುಕಲ್ಲಿ ಹಾಗೆಯೇ ಪಯಣಿಸುತ್ತಾ .....

 

               



ಮಧ್ಯ ಬರೋ ದಲ್ಲಾಳಿ ಯಾರೋ ತಿಳಿಯದು....

ಆದರೇ...

ಮನದ ಭಾವಗಳ ವ್ಯಾಪಾರಿ ನಾ......

ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....

ಹಕ್ಕುಗಳನ್ನ ಕಾಯ್ದಿರಿಸಲಾಗಿದೆ  !!